ಹೊಸದುರ್ಗ: ಇಲ್ಲಿನ ಎಸ್ಆರ್ಎಸ್ ಫೌಂಡೇಷನ್ನಿಂದ ಪಟ್ಟಣದ ಹುಳಿಯಾರು ವೃತ್ತದಲ್ಲಿ ಶುಕ್ರವಾರ ರಿಯಾಯ್ತಿ ದರದಲ್ಲಿ ತಿಂಡಿ ಹಾಗೂ ಊಟ ಒದಗಿಸುವ ಜನಸ್ನೇಹಿ ಕ್ಯಾಂಟೀನ್ ತೆರೆಯಲಾಗಿದೆ.
‘ಮೂರು ತಿಂಗಳ ಹಿಂದೆ ನಮ್ಮ ಸಂಸ್ಥೆ ಹಾಗೂ ಹೊಸನಗರದ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ತಾಲ್ಲೂಕಿನ ಸಿರಿಗೊಂಡನಹಳ್ಳಿಯಲ್ಲಿ ಗೋಶಾಲೆ ಸ್ಥಾಪಿಸಿದ್ದೆವು. ಆಗ ಕೆಲವು ರೈತರು ಬರದಲ್ಲಿ ಜಾನುವಾರುಗೆ ಮೇವು ಕೊಟ್ಟಿದ್ದೀರಿ. ನಮಗೂ ಊಟ ಕೊಡಿ ಎಂದು ಕೇಳಿದ್ದರು.
ಹಾಗಾಗಿ ಜನರ ಸೇವೆ ಮಾಡುವ ಉದ್ದೇಶದಿಂದ ರಿಯಾಯ್ತಿ ದರದಲ್ಲಿ ಬೆಳಗ್ಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟ ಕೋಡುವ ಉದ್ದೇಶದಿಂದ ಕ್ಯಾಂಟೀನ್ ತೆರೆಯಲಾಗಿದೆ’ ಎಂದು ಎಸ್ಆರ್ಎಸ್ ಫೌಂಡೇಷನ್ ಮುಖ್ಯಸ್ಥ ಎ.ಆರ್.ಶಮಂತ್ ತಿಳಿಸಿದರು.
‘ಬೆಳಿಗ್ಗೆ 8.30ರಿಂದ 10ರ ವರೆಗೆ ₹ 9ರ ದರದಲ್ಲಿ ಚಿತ್ರನ್ನಾ, ಪುಳಿಯೊಗರೆ, ಪುಲಾವ್, ಟೊಮೆಟೋ ಬಾತ್, ಉಪ್ಪಿಟ್ಟು ನೀಡಲಾಗುವುದು. ಹಾಗೆಯೇ ಮಧ್ಯಾಹ್ನ 1ರಿಂದ 3ರ ವರೆಗೆ ₹ 15ರ ದರದಲ್ಲಿ ಅನ್ನ ಸಂಬಾರು, ಹಪ್ಪಳ, ಉಪ್ಪಿನಕಾಯಿ, ಚಟ್ನಿ ಒದಗಿಸಲಾಗುವುದು. ಇಬ್ಬರು ಅಡುಗೆ ತಯಾರಿಸುವವರು, ಮೂರು ಮಂದಿ ಸಹಾಯಕರು ಹಾಗೂ ಒಬ್ಬರೂ ಕ್ಯಾಷಿಯರ್ ಇದ್ದಾರೆ.
ತಿಂಡಿ ಮತ್ತು ಊಟದ ಅವಧಿಯಲ್ಲಿ ಎಷ್ಟು ಜನರು ಬಂದರೂ ವ್ಯವಸ್ಥೆ ಮಾಡಲಾಗುವುದು. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಉದ್ದೇಶಕ್ಕಾಗಿ ಮಾತ್ರ ಕ್ಯಾಂಟೀನ್ ತೆರೆದಿಲ್ಲ. ಚುನಾವಣೆಯ ನಂತರವೂ ನಿರಂತರವಾಗಿ ಬಡಜನರಿಗೆ ಸೇವೆ ಒದಗಿಸಲಾಗುವುದು‘ ಎಂದು ಹೇಳಿದರು.
‘ಮಧ್ಯಾಹ್ನದ ಊಟ ಸೇವಿಸಿದ ಹಮಾಲಿ ಕಾರ್ಮಿಕ ಕಾಳಪ್ಪ ಮಾತನಾಡಿ, ₹ 9ಕ್ಕೆ ತಿಂಡಿ, ₹15ಕ್ಕೆ ಊಟ ಹೊರಗಡೆ ಎಲ್ಲಿಯೂ ಸಿಗುವುದಿಲ್ಲ. ಇಷ್ಟು ಕಡಿಮೆ ದರಕ್ಕೆ ರುಚಿ ಹಾಗೂ ಶುಚಿಯಾಗಿ ತಿಂಡಿ ಹಾಗೂ ಊಟ ನೀಡುತ್ತಿರುವುದು ನಮ್ಮತ್ತ ಬಡ ಕಾರ್ಮಿಕರಿಗೆ ಹೆಚ್ಚು ಉಪಯೋಗ ಆಗಲಿದೆ. ಈ ಸೇವೆ ನಿರಂತರವಾಗಿರಲಿ‘ ಎಂದು ತಿಳಿಸಿದರು.
ಪೂಜಾರ್ ಪ್ರಕಾಶ್, ನಾಗರಾಜು, ಮಂಜುನಾಥ್, ಗೋಪಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.