ADVERTISEMENT

‘ಅನ್ನಭಾಗ್ಯ ಧಾನ್ಯ’ ನಾಮಫಲಕ ಅಳವಡಿಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 10:05 IST
Last Updated 21 ಡಿಸೆಂಬರ್ 2013, 10:05 IST

ಚಿತ್ರದುರ್ಗ: ಅನ್ನಭಾಗ್ಯ ಯೋಜನೆ ಯಡಿ ಅಕ್ಕಿ ಸಾಗಿಸುವ ವಾಹನಗಳ ಮುಂಭಾಗದಲ್ಲಿ ‘ಅನ್ನಭಾಗ್ಯ ಧಾನ್ಯ’ವೆಂದು ನಾಮಫಲಕ ಕಡ್ಡಾಯವಾಗಿ ಅಳವಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್‌. ಮಂಜುನಾಥ್ ಪ್ರಸಾದ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣ ದಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಿಂದ ತಾಲ್ಲೂಕು ಕೇಂದ್ರಗಳಿಗೆ ಸಾಗಿಸುವಾಗ ಅಕ್ಕಿಯನ್ನು ಬದಲಿಸಿ ಕಳಪೆ ಅಕ್ಕಿ ನೀಡಿರುವ ಉದಾಹರಣೆಗಳಿವೆ. ಲೋಡ್ ಆದಂತಹ ವಾಹನ ಗೋದಾಮು ತಲುಪವರೆಗೂ ಆಹಾರ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು.

ಜನವರಿಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ತಿಂಗಳ ಆರಂಭದಿಂದಲೇ ಆಹಾರ ಧಾನ್ಯ ನೀಡಲು ಆಯಾ ತಿಂಗಳ ಕೊನೆಯಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯವನ್ನು ತಲುಪಿಸಲಾಗುತ್ತದೆ. ನ್ಯಾಯಬೆಲೆ ಅಂಗಡಿಯವರು ವಾರದಲ್ಲಿ ಮಂಗಳವಾರ ಹೊರತುಪಡಿಸಿ ಉಳಿದ ದಿನಗಳಂದು ಬೆಳಿಗ್ಗೆ ೮ ರಿಂದ ಮಧ್ಯಾಹ್ನ ೧೨ ಮತ್ತು ಸಂಜೆ ೪ರಿಂದ ೮ ಗಂಟೆಯವರೆಗೆ ಪಡಿತರ ಚೀಟದಾರರಿಗೆ ಆಹಾರ ಧಾನ್ಯ ನೀಡಬೇಕೆಂದು ಎಲ್ಲಾ ನ್ಯಾಯಬೆಲೆ ಅಂಗಡಿಯವರಿಗೆ ಸೂಚನೆ ನೀಡಲಾಗಿರುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು.

ಕ್ಷೀರಭಾಗ್ಯದಡಿ ಶಾಲೆಯ ಮಕ್ಕಳಿಗೆ ವಾರದಲ್ಲಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಸೇರಿ ಮೂರು ದಿನ ಹಾಲನ್ನು ನೀಡಲಾಗುತ್ತಿದೆ. ಆದರೆ ಶನಿವಾರ ಮಕ್ಕಳು ಶಾಲೆಗೆ ಬೇಗ ಬರುವುದರಿಂದ ಬೆಳಗಿನ ವೇಳೆ ಹಾಲನ್ನು ನೀಡಿದರೆ ಚೆನ್ನಾಗಿರುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.

ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ನಾರಾಯಣಸ್ವಾಮಿ, ಉಪ ವಿಭಾಗಾಧಿಕಾರಿ ಎನ್.ತಿಪ್ಪೇಸ್ವಾಮಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.