ಹೊಸದುರ್ಗ: ಟೀಕೆ, ಟಿಪ್ಪಣಿಗಳಿಗೆ ಅಂಜದೆ ಅವುಗಳನ್ನು ಸವಾಲಾಗಿ ಸ್ವೀಕರಿಸಿದಲ್ಲಿ ಮಾತ್ರ ವ್ಯಕ್ತಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಹಂಪಿ ಹೇಮಕೂಟ ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಬುಧವಾರ ಪಟ್ಟಣದ ಬನಶಂಕರಿ ಪತ್ತಿನ ಸಹಕಾರಿ ಬ್ಯಾಂಕ್ನ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಗೌರವ ಸಂಪಾದಿಸಬೇಕಾದರೆ ಜ್ಞಾನದ ಜತೆಗೆ, ಆರ್ಥಿಕವಾಗಿ ಸದೃಢನಾಗಿರ ಬೇಕಾಗುತ್ತದೆ. ಸಮಾಜದ ಕಟ್ಟುಪಾಡುಗಳಿಗೆ ಬದ್ಧನಾಗಿ ನಡೆದು ಕೊಳ್ಳಬೇಕಾಗುತ್ತದೆ. ಸಂಘಟನೆಯ ಮನೋಭಾವನೆ ಯೊಂದಿಗೆ, ರಾಜಕೀಯ ಪ್ರವೇಶಿಸಿ, ಸಮಾಜದ ಅಭಿವೃದ್ಧಿಗೆ ಶ್ರಮಸುವಂತೆ ಕಿವಿಮಾತು ಹೇಳಿದರು.
ವ್ಯಕ್ತಿ ಅಭಿವೃದ್ಧಿಯಾಗಬೇಕಾದರೆ ಕಾಯಕದ ಕಡೆ ಗಮನ ನೀಡಬೇಕು. ಉಳಿತಾಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಗಳಿಕೆ, ಉಳಿಕೆ ಹಾಗೂ ಬಳಕೆಯ ಮೌಲ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ್ ಬ್ಯಾಂಕ್ನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಇಂದು ಸಹಕಾರಿ ಬ್ಯಾಂಕ್ಗಳು ಎಲ್ಲಾ ವರ್ಗದವರ ಅಭಿವೃದ್ಧಿಗೆ ಸಹಕಾರಿಯಾಗಿವೆ. ಉತ್ತರ ಕರ್ನಾಟಕದ ಬಹುತೇಕ ನೇಕಾರರು ಸಹಕಾರಿ ಬ್ಯಾಂಕ್ಗಳ ನೆರವಿನಿಂದ ಅಭಿವೃದ್ಧಿ ಹೊಂದುತ್ತಿದ್ದಾರೆ. ಹಾಗಾಗಿ, ಸಹಕಾರದ ಗುಣದೊಂದಿಗೆ ಬ್ಯಾಂಕ್ನ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಸಹಕಾರಿ ಬ್ಯಾಂಕ್ನ ಪ್ರಗತಿಗೆ ಸದಸ್ಯರಲ್ಲಿ ನಂಬಿಕೆ ಹಾಗೂ ವಿಶ್ವಾಸ ಇರಬೇಕು ಎಂದರು.
ಎ.ಎಚ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಡಿ.ಎಸ್.ಸೂರ್ಯ ನಾರಾಯಣ್, ಗೋ.ತಿಪ್ಪೇಶ್, ಡಿ.ಆರ್. ಗೋವಿಂದರಾಜು, ಚಿತ್ರದುರ್ಗ ಸಹಕಾರ ಸಂಘಗಳ ಉಪನಿಬಂಧಕ ಜಿ.ಓಬನಾಯ್ಕ್, ಎಂ.ಆರ್.ಶಾಂತಪ್ಪ, ಡಿ.ರಾಮ ಚಂದ್ರಪ್ಪ, ಡಿ.ಟಿ.ಚಂದ್ರ ಶೇಖರ್, ರಾಮಚಂದ್ರಪ್ಪ, ರಂಗನಾಥ್, ಪಡಸಾಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.