ಸಿರಿಗೆರೆ: ಕೃಷಿಕರು ಸದ್ದಿಲ್ಲದಂತೆ ಏನೇನೋ ಪ್ರಯೋಗ ಮಾಡಿ ಬೆಳಕಿಗೆ ಬರುತ್ತಿದ್ದಾರೆ. ಸಮೀಪದ ಚಿಕ್ಕಬೆನ್ನೂರು ಗ್ರಾಮದ ತಿಪ್ಪೇಸ್ವಾಮಿ ತಮ್ಮ 53ನೇ ವಯಸ್ಸಿನಲ್ಲಿಯೂ ಕೃಷಿ ಚಟುವಟಿಕೆ ಬಿಡದೇ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸಿ ಗಮನ ಸೆಳೆದಿದ್ದಾರೆ.
ತಮ್ಮ ಪಾಲಿಗಿರುವ ಅತ್ಯಲ್ಪ ಜಮೀನಿನಲ್ಲೇ ಅಡಿಕೆ ಬೆಳೆಯಲು ಮುಂದಾಗಿ, 3 ತಿಂಗಳ ಹಿಂದೆ ಅಡಿಕೆ ಸಸಿ ನೆಟ್ಟಿದ್ದಾರೆ. ಆ ಸಸಿಗಳ ಮಧ್ಯೆ ಕೇವಲ 12 ಸಾಲು ಬೆಂಡೆ ಬೀಜ ಬಿತ್ತಿ ಉತ್ತಮ ಇಳುವರಿ ತೆಗೆದಿದ್ದಾರೆ.
ಇದಕ್ಕೆ ತಿಪ್ಪೇಸ್ವಾಮಿ ಖರ್ಚು ಮಾಡಿರುವುದು ₹ 4,000 ಮಾತ್ರ. ಅಡಿಗೊಂದರಂತೆ ಭೂಮಿಯ ಹದ ನೋಡಿಕೊಂಡು ಬೆಂಡೆ ಊರಿದ್ದಾರೆ. ಅವು ಮೊಳಕೆ ಬಂದ ಕೆಲ ದಿನಗಳ ನಂತರ ಅಲ್ಪ ಪ್ರಮಾಣದ ರಸಗೊಬ್ಬರ ಕೊಟ್ಟಿದ್ದಾರೆ. ನೋಡನೋಡುತ್ತಿದ್ದಂತೆಯೇ ಸಸಿಗಳು ನಳನಳಿಸತೊಡಗಿದವು. ಇದರಿಂದ ಖುಷಿಯಾದ ರೈತ ಬೆಳೆಯನ್ನು ಕಾಪಾಡಿಕೊಳ್ಳಲು 3 ಬಾರಿ ಕೀಟನಾಶಕ ಸಿಂಪಡಿಸಿದ್ದಾರೆ. ಇದರ ಪರಿಣಾಮ ಬೆಂಡೆ ನಿರೀಕ್ಷೆ ಮೀರಿ ಬೆಳೆದಿದೆ.
‘ಮೆಕ್ಕೆಜೋಳ ಬೆಳೆದಿದ್ದರೆ ನನಗೆ ಇಷ್ಟು ಲಾಭ ಆಗುತ್ತಿರಲಿಲ್ಲ’ ಎನ್ನುವ ಅವರು, ‘ಖರ್ಚು ತೆಗೆದು ಈಗಾಗಲೇ ಅಂದಾಜು ₹ 75,000 ಆದಾಯ ಬಂದಿದೆ’ ಎನ್ನುತ್ತಾರೆ.
ಮೊದಲೆಲ್ಲ ಸಮೀಪದ ಹಳ್ಳಿಗಳಲ್ಲಿ ನಡೆಯುವ ವಾರದ ಸಂತೆಗಳಿಗೆ ಬೆಂಡೆಕಾಯಿ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಅಲ್ಲಿ ಬೆಲೆ ಕಡಿಮೆ ಸಿಗುತ್ತಿದ್ದರಿಂದ ಚಿತ್ರದುರ್ಗ ಮತ್ತು ದಾವಣಗೆರೆ ಮಾರುಕಟ್ಟೆಗೆ ಒಯ್ದಿದ್ದಾರೆ. ಇದರಿಂದ ಒಳ್ಳೆಯ ಬೆಲೆ ಸಿಕ್ಕಿದೆ. ಇನ್ನೂ ಕಡಿಮೆ ಎಂದರೂ ₹ 20,000ದಷ್ಟು ಇಳುವರಿ ಬರಬಹುದೆಂಬ ಅಂದಾಜು ಅವರದು.
‘ಈ ರೀತಿ ಬೆಳೆ ಬೆಳೆದಿರುವುದು ಹೊಸದು. ಇಷ್ಟು ಕಡಿಮೆ ಖರ್ಚು ಮಾಡಿ ನನಗೆ ಲಾಭ ಬಂದಿದೆ. ಬೆಳೆ ಕಡಿಮೆ ಇದ್ದಾಗ ನಾನೇ ಬಿಡಿಸುತ್ತೇನೆ. ಗಿಡದಲ್ಲಿ ಜಾಸ್ತಿ ಬೆಳೆ ಇದ್ದಾಗ ಕೂಲಿಯವರನ್ನು ಕರೆದುಕೊಳ್ಳುತ್ತೇನೆ. ಮೆಕ್ಕೆಜೋಳ ಬಿತ್ತಿದ್ದರೆ ಆ ಬೆಳೆಗೆ ಮಾಡುವ ಖರ್ಚು ಅಧಿಕವಾಗಿರುತ್ತಿತ್ತು. ಹಣ ಕೈಗೆ ಬರಲು ಕಾಯಬೇಕಿತ್ತು. ಆದರೆ, ಬೆಂಡೆ ಬಿತ್ತಿದ್ದರಿಂದ ನಾನು ಬಿಡಿಸಿ ಮಾರುಕಟ್ಟೆಗೆ ಕೊಂಡೊಯ್ದ ದಿನವೇ ಹಣ ಸಿಗುತ್ತದೆ. ಇದು ಖುಷಿಯ ವಿಚಾರ’ ಎಂದು ಅವರು ಹೇಳುತ್ತಾರೆ.
ಇಷ್ಟೊಂದು ಆದಾಯ ಬರುವ ನಿರೀಕ್ಷೆ ಇರಲಿಲ್ಲ. ನಾನು ತಂದೆ ಮತ್ತು ತಾಯಿ ಮೂವರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಕೂಲಿ ಕಾರ್ಮಿಕರನ್ನು ಹೆಚ್ಚು ಅವಲಂಬಿಸದೇ ಇರುವುದರಿಂದ ಲಾಭದ ಪ್ರಮಾಣ ಸ್ವಲ್ಪ ಜಾಸ್ತಿಯಾಗಿದೆ.
– ಟಿ. ಮಂಜುನಾಥ್ ತಿಪ್ಪೇಸ್ವಾಮಿಯವರ ಮಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.