ADVERTISEMENT

ಯುವ ಕಾಂಗ್ರೆಸ್ ಸಮಿತಿಯಿಂದ ಬಿಜೆಪಿ ಕಚೇರಿ ಮುತ್ತಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 9:50 IST
Last Updated 6 ಫೆಬ್ರುವರಿ 2018, 9:50 IST

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ನೀಡಿದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ, ಬಿಜೆಪಿ ಪರಿವರ್ತನೆ ಯಾತ್ರೆಯಲ್ಲಿ ಪಾಲ್ಗೊಂಡ ಅವರು ರಾಜ್ಯದ ಯಾವ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ ಎಂದು ಆರೋಪಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಸೋಮವಾರ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಮಧುಪಾಲೇಗೌಡ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಹೊರಟ ಕಾರ್ಯಕರ್ತರು ಕೆಳಗೋಟೆಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಮುತ್ತಿಗೆ ಯತ್ನವನ್ನು ವಿಫಲಗೊಳಿಸಿದರು.

ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪದಲ್ಲಿ ಪ್ರಧಾನಿ ಮೋದಿ ಕಾವೇರಿ, ಮಹದಾಯಿ ಸಮಸ್ಯೆ ಬಗ್ಗೆ ಮಾತನಾಡಬೇಕಿತ್ತು. ಆದರೆ, ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ದೂರಿದರು.

ADVERTISEMENT

‘ಬುಲೆಟ್ ರೈಲು, ಸ್ಮಾರ್ಟ್ ಸಿಟಿ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯೂ ಹುಸಿ ಸುಳ್ಳು' ಎಂದು ದೂರಿದರು. 'ದಾವೂದ್ ಸಿಗಲಿಲ್ಲ. ಗಂಗೆ ಶುದ್ಧಿಯಾಗಲಿಲ್ಲ. ರಾಮಮಂದಿರ ಕಟ್ಟಲು ಆಗಲಿಲ್ಲ. ವಿದೇಶಗಳಲ್ಲಿರುವ  ಕಪ್ಪು ಹಣವನ್ನೂ ತಾರದೆ, ಜನರನ್ನು ವಂಚಿಸಿದ್ದಾರೆ' ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಹಸನ್‌ ತಾಹೀರ್, ಉಪಾಧ್ಯಕ್ಷ ಅಶೋಕ್ ನಾಯ್ಡು, ರೆಹಮಾನ್, ವಸೀಂ, ಮಹಮದ್ ಆಜಾಂ, ಮುಖಂಡರಾದ  ಅಬ್ದುಲ್ ಜಬ್ಬಾರ್, ಎಸ್.ರಾಜೇಂದ್ರ ಪ್ರಸಾದ್, ಜಿ.ಮನೋಹರ್, ಮಹಡಿ ಶಿವಮೂರ್ತಿ, ಅಂಜಿನಪ್ಪ, ಶೌಕತ್, ವಿಕಾಸ್, ಹರ್ಷ ಆಜಾಂ, ಸಿಬ್ಬು ಷರೀಫ್, ಕರಿಯಪ್ಪ, ರಮೇಶ್, ರಫಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಡಾವಣೆ ಠಾಣೆ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.