ಸಿರಿಗೆರೆ: ಪದವಿಪೂರ್ವ ಶಿಕ್ಷಣ ಇಲಾಖೆ, ಇಲ್ಲಿನ ಬಿ. ಲಿಂಗಯ್ಯ ವಸತಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ ಸಮೀಪದ ಸಿರಿಗೆರೆ-ಸಿದ್ದಾಪುರ ಗ್ರಾಮದಲ್ಲಿ `ಜಲ, ವನ ನಮ್ಮ ಸಂಪತ್ತು~ ಶೀರ್ಷಿಕೆ ಅಡಿ ಅ. 7ರಿಂದ 13ರವರೆಗೆ 7 ದಿನ ವಿಶೇಷ ವಾರ್ಷಿಕ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ಗ್ರಾಮೀಣ ಜನರಿಗೆ ಅನುಭವಿ ಕಾನೂನು ತಜ್ಞರಿಂದ ಕಾನೂನು ಅರಿವು-ನೆರವು, ನುರಿತ ವೈದ್ಯರಿಂದ ಉಚಿತ ಆರೋಗ್ಯ ಮತ್ತು ದಂತ ತಪಾಸಣೆ ಮತ್ತು ಚಿಕಿತ್ಸೆ, ಗ್ರಾಮದ ಗೋಮಾಳ ಮತ್ತು ಶಾಲಾ ಆವರಣ ಮುಂತಾದ ಕಡೆ ಸಸಿ ನೆಡುವುದು, ಇಂಗುಗುಂಡಿ ಹಾಗೂ ಶೌಚಾಲಯ ನಿರ್ಮಾಣ, ಪಶು ಆರೋಗ್ಯ ತಪಾಸಣೆ ಮತ್ತು ಉಚಿತ ಚಿಕಿತ್ಸೆ, ಸಮರ್ಪಕ ಚರಂಡಿ ವ್ಯವಸ್ಥೆಗಳ ನಿರ್ವಹಣೆ, ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ಕೃಷಿ ಕುರಿತ ಮಾಹಿತಿ ಮತ್ತು ವಿಚಾರ ಸಂಕಿರಣ, ಅಗ್ನಿ ಅನಾಹುತಗಳು ತಡೆಗಟ್ಟುವಿಕೆ ಹಾಗೂ ಮುಂಜಾಗ್ರತಾ ಕ್ರಮಗಳು, ಮುಂತಾದ ಜನಪರ ಕಾರ್ಯಕ್ರಮಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
7ರಂದು ಸಂಜೆ 6.30ಕ್ಕೆ ತಹಶೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಶಿಬಿರ ಉದ್ಘಾಟಿಸಲಿದ್ದು, ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಡಿ. ಮಹದೇವಪ್ಪ ಅಧ್ಯಕ್ಷತೆ ವಹಿಸುವರು.
ಸಿರಿಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ. ಮಹಂತೇಶ್, ಪ್ರಾಂಶುಪಾಲ ಆರ್. ಕುಮಾರಸ್ವಾಮಿ, ಐ.ಜಿ. ಚಂದ್ರಶೇಖರಯ್ಯ, ಎಸ್.ಜಿ. ರವಿಕುಮಾರ್, ಎಂ. ನಾಗರಾಜ್,ಆರ್. ವೀರಭದ್ರಯ್ಯ, ಕೆ.ಬಿ. ಗಂಗಾಧರಪ್ಪ, ಎಸ್.ಪಿ. ಯೋಗರಾಜ್, ಸಿ. ಮಹೇಶ್ವರಪ್ಪ ಮತ್ತು ಜಿ.ಬಿ. ನಿಜಲಿಂಗಪ್ಪ ಉಪಸ್ಥಿತರಿರುವರು ಎಂದು ರಾಷ್ಟ್ರೀಯ ಸೇವಾ ಯೋಜನಾ ಶಿಬಿರಾಧಿಕಾರಿ ಎಚ್.ಎ. ವಿಶ್ವಕುಮಾರ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.