
ಹೊಳಲ್ಕೆರೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ದೇಶಭಕ್ತ ಸಂಘಟನೆಯಾಗಿದೆ ಎಂದು ಶಿವಮೊಗ್ಗ ವಿಭಾಗೀಯ ಬೌದ್ಧಿಕ ಪ್ರಮುಖ್ ರಾಮಚಂದ್ರ ತಿಳಿಸಿದರು.
ಪಟ್ಟಣದ ಸಂವಿಧಾನ ಸೌಧದ ಮುಂದೆ ಶನಿವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯದಶಮಿಯ ಅಂಗವಾಗಿ ಏರ್ಪಡಿಸಿದ್ದ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರ್ಎಸ್ಎಸ್ ದೇಶದ ಜನರಲ್ಲಿ ರಾಷ್ಟ್ರೀಯತೆಯನ್ನು ಜಾಗೃತಗೊಳಿಸುವ ಕಾರ್ಯ ಮಾಡುತ್ತಿದೆ. ರಾಷ್ಟ್ರೀಯ ಭಾವೈಕ್ಯ ಮೂಡಿಸುವ ಕೆಲಸ ಮಾಡುತ್ತಿದೆ. ದೇಶಕ್ಕೆ ಪ್ರಕೃತಿ ವಿಕೋಪ, ಸಾಂಕ್ರಾಮಿಕ ರೋಗದಂತಹ ಪರಿಸ್ಥಿತಿ ಬಂದಾಗ ಮೊದಲು ಸಹಾಯಕ್ಕೆ ನಿಲ್ಲುವುದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಸಂಘವು ಜನರಲ್ಲಿ ಶಿಸ್ತು, ಸಂಸ್ಕಾರ ಬೆಳೆಸುತ್ತದೆ ಎಂದರು.
ಪಟ್ಟಣದ ಶಿವಮೊಗ್ಗ ರಸ್ತೆ, ಗಣಪತಿ ರಸ್ತೆ, ಚಿತ್ರದುರ್ಗ ರಸ್ತೆ, ಹೊಸದುರ್ಗ ರಸ್ತೆಯಲ್ಲಿ ಪಥ ಸಂಚಲನ ನಡೆಯಿತು. ಮಹಿಳೆಯರು ಸ್ವಯಂ ಸೇವಕರ ಹಣೆಗೆ ಕೆಂಪು ತಿಲಕ ಇಟ್ಟು ಹೂ ನೀಡಿ ಸ್ವಾಗತಿಸಿದರು. ನಗರವನ್ನು ಕೇಸರಿ ಬಾವುಟ, ರಂಗೋಲಿಗಳಿಂದ ಅಲಂಕರಿಸಲಾಗಿತ್ತು. ನಾಗರಿಕರು ಸ್ವಯಂ ಸೇವಕರ ಮೇಲೆ ಹೂ ಸುರಿದು ಸ್ವಾಗತಿಸಿದರು. ತಾಯಂದಿರು ಪುಟ್ಟ ಮಕ್ಕಳಿಗೂ ಗಣವೇಷ ತೊಡಿಸಿ ಸಂಭ್ರಮಿಸಿದರು.
ಶಾಸಕ ಎಂ.ಚಂದ್ರಪ್ಪ, ಬಿಜೆಪಿ ಮುಖಂಡ ರಘುಚಂದನ್, ಉಮೇಶ್ ಕಾರಜೋಳ, ಆರ್ಎಸ್ಎಸ್ ಸರ ಸಂಚಾಲಕ ಡಾ.ಶ್ರೀಪತಿ, ಪುರಸಭೆ ಸದಸ್ಯ ಪಿ.ಎಚ್.ಮುರುಗೇಶ್, ಆರ್.ಎ.ಅಶೋಕ್, ಡಿ.ಸಿ.ಮೋಹನ್ ಗಣವೇಷ ಧರಿಸಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಆರ್ಎಸ್ಎಸ್ ಜಿಲ್ಲಾ ಕಾರ್ಯವಾಹ ರಾಮಕಿರಣ್, ಸಹಕಾರ್ಯವಾಹ ಟಿ.ನವೀನ್, ಧೃವಕುಮಾರ್, ಗಿರೀಶ್, ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.