ಚಳ್ಳಕೆರೆ: ತಾಲ್ಲೂಕಿನಲ್ಲಿ ಉತ್ತಮ ಮಳೆ ಬಿದ್ದ ಕಾರಣ ರೈತರು ಮುಂಗಾರು ಹಂಗಾಮಿನ ಆರಂಭದಲ್ಲೇ ನೀರಾವರಿ- ಖುಷ್ಕಿ ಕಪ್ಪು ಮತ್ತು ಕೆಂಪು ಮಣ್ಣಿನ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದರು.
ಆದರೆ, ನಿರಂತರವಾಗಿ ಬಿದ್ದ ಮಳೆಯಿಂದ ತೇವಾಂಶ ಹೆಚ್ಚಿದ ಪರಿಣಾಮ ಹತ್ತಿಗಿಡದಲ್ಲಿ ಕಾಯಿ ಒಡೆಯದೆ ಬೆಳೆ ವಿಫಲವಾಗಿದೆ. ಇನ್ನು ಕೆಲವೆಡೆ ಗುಣಮಟ್ಟದ ಹತ್ತಿ ಬಂದಿಲ್ಲ. ಇದರಿಂದ ಉತ್ತಮ ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದ ತಾಲ್ಲೂಕಿನ ನಗರಂಗೆರೆ, ಸಿದ್ದಾಪುರ, ಹೊಟ್ಟೆಪ್ಪನಹಳ್ಳಿ, ಚಿಕ್ಕಮಧುರೆ, ಗಂಜಿಗುಂಟೆ, ಬೆಳೆಗರೆ, ನಾರಾಯಣಪುರ, ಸೂರನಹಳ್ಳಿ, ಚೌಳೂರು, ಘಟಪರ್ತಿ, ಗೌಡಗೆರೆ, ಮಲ್ಲೋರಹಳ್ಳಿ, ಬಂಜಗೆರೆ ಮುಂತಾದ ಗ್ರಾಮದ ಬೆಳೆಗಾರರು ಕಂಗಾಲಾಗಿದ್ದಾರೆ.
ತೇವಾಂಶ ಹೆಚ್ಚಳದಿಂದ ಹತ್ತಿಕಾಯಿ ಗಳು ಗಿಡದಲ್ಲೇ ಕೊಳೆತಿವೆ. ಅಲ್ಲದೆ ಮೋಡ ಕವಿದ ವಾತಾವರಣದಿಂದ ಕೆಲವೆಡೆ ಫಸಲನ್ನು ಬಿಡಿಸಿ ಬಿಸಿಲಿಗೆ ಒಣಗಿಸಲು ಸಾಧ್ಯವಾಗದ ಕಾರಣ ಬೆಳೆಯನ್ನು ಹೊಲದಲ್ಲೇ ಬಿಟ್ಟಿದ್ದಾರೆ. ಇದರಿಂದ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
‘ಮೂರು ಎಕರೆಯಲ್ಲಿ ಬಿ.ಟಿ. ಹತ್ತಿ ಬಿತ್ತನೆ ಮಾಡಿದ್ದೆ. ನೀರು, ಗೊಬ್ಬರ ಮತ್ತು ಔಷಧ ಎಲ್ಲವೂ ಸಮ ಪ್ರಮಾಣದಲ್ಲಿ ಹಾಕಿದ್ದೆ. ಬೆಳೆ ಉತ್ತಮವಾಗಿತ್ತು. ಉತ್ತಮ ಆದಾಯ ಬರುತ್ತದೆ ಎಂಬ ನಿರೀಕ್ಷೆಯೂ ಇತ್ತು. ಆದರೆ, 20ರಿಂದ 25 ದಿನ ನಿರಂತರವಾಗಿ ಸುರಿದ ಮಳೆಗೆ ಬೆಳೆ ನಾಶವಾಯಿತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಯ್ತು. ಬೆಳೆಗೆ ಹಾಕಿದ ಬಂಡವಾಳವು ಸಿಗದ ಸ್ಥಿತಿ ಉಂಟಾಗಿದೆ’ ಎನ್ನುವರು ಬೆಳೆಗಾರ ಜಗನ್ನಾಥ್.
ತಾಲ್ಲೂಕಿನಲ್ಲಿ ಒಟ್ಟು 750 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಅದರಲ್ಲಿ ಖುಷ್ಕಿ 42 ಹೆಕ್ಟೇರ್ ಮತ್ತು ನೀರಾವರಿ 318 ಹೆಕ್ಟೇರ್ ಸೇರಿ ಒಟ್ಟು 360 ಹೆಕ್ಟೇರ್ ಪ್ರದೇಶದಲ್ಲಿ ಬಿ.ಟಿ.ತಳಿಯ ಹತ್ತಿಯನ್ನೇ ಬಿತ್ತನೆ ಮಾಡಲಾಗಿದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದ ಪರಿಣಾಮ ಮತ್ತು ಸದಾ ಮೋಡ ಕವಿದ ವಾತಾವರಣ ಇದ್ದುದರಿಂದ ಬೆಳೆಯ ಸಿಪ್ಪಲು ಮತ್ತು ಹೂವು ಉದುರಿ, ಕಾಯಿಯಲ್ಲಿ ಹತ್ತಿ ಒಡೆದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.