ADVERTISEMENT

ಅಪಘಾದಲ್ಲಿ ಗಾಯಗೊಂಡಿದ್ದ ಎಸಿ ಸಾವು

ವಾಯುವಿಹಾರ ನಡೆಸುತ್ತಿದ್ದಾಗ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ

​ಪ್ರಜಾವಾಣಿ ವಾರ್ತೆ
Published 4 ಮೇ 2021, 14:28 IST
Last Updated 4 ಮೇ 2021, 14:28 IST
ವಿ.ಪ್ರಸನ್ನ
ವಿ.ಪ್ರಸನ್ನ   

ಚಿತ್ರದುರ್ಗ: ವಾಯುವಿಹಾರ ನಡೆಸುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಉಪವಿಭಾಗಾಧಿಕಾರಿ ವಿ.ಪ್ರಸನ್ನ (52) ಚಿಕಿತ್ಸೆಗೆ ಸ್ಪಂದಿಸದೇ ಬೆಂಗಳೂರಿನ ಆಸ್ಟರ್‌ ಸಿಎಂಐ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ.

ನಗರದ ತುರುವನೂರು ರಸ್ತೆಯಲ್ಲಿ ಸೋಮವಾರ ನಸುಕಿನಲ್ಲಿ ವಾಯುವಿವಾರ ನಡೆಸುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು.

‘ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ಬೆಂಗಳೂರಿಗೆ ಕರೆದೊಯ್ದೆವು. ಅವರಿಗೆ ಪ್ರಜ್ಞೆ ಮರಳದೇ ಸ್ಥಿತಿ ಇನ್ನಷ್ಟು ಗಂಭೀರವಾಯಿತು. ಮೃತಪಟ್ಟಿರುವ ಮಾಹಿತಿಯನ್ನು ಮಧ್ಯಾಹ್ನದ ವೇಳೆಗೆ ಆಸ್ಪತ್ರೆ ಖಚಿತಪಡಿಸಿತು’ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ಎಂಎಸ್ಸಿ ಪದವೀಧರ:ಚಿತ್ರದುರ್ಗ ತಾಲ್ಲೂಕಿನ ಕಡಬನಕಟ್ಟೆ ಗ್ರಾಮದ ಪ್ರಸನ್ನ ಅವರು 1970ರ ಜ.14ರಂದು ಜನಿಸಿದ್ದರು. ರಸಾಯನ ವಿಜ್ಞಾನದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪದವಿಯನ್ನು ಚಿನ್ನದ ಪದಕದೊಂದಿಗೆ ಪೂರೈಸಿದ್ದರು. ಬೆಂಗಳೂರಿನ ನೆಲಮಂಗಲದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಬರೆದ ಅವರು, ಆಡಳಿತಾತ್ಮಕ ಸೇವೆಗೆ ಸೇರಿದರು. ಸೇವೆಯ ಬಹುದಿನಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ 2006ರ ಏ.15ರಂದು ತಹಶೀಲ್ದಾರ್‌ ಆಗಿ ಸೇವೆ ಆರಂಭಿಸಿದರು. ಮಧುಗಿರಿ ತಾಲ್ಲೂಕು, ಉಡುಪಿ ಹಾಗೂ ಮಂಗಳೂರು ಜಿಲ್ಲೆಯಲ್ಲಿ ಕೆಲಸ ಮಾಡಿದ್ದಾರೆ. 2019ರ ಸೆಪ್ಟೆಂಬರ್‌ನಲ್ಲಿ ಚಿತ್ರದುರ್ಗ ಉಪವಿಭಾಗಾಧಿಕಾರಿಯಾಗಿದ್ದರು. ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಸಾಗರಕ್ಕೆ ವರ್ಗಾವಣೆಯಾಗಿ, ಮತ್ತೆ ಮರಳಿದ್ದರು.

ಅಂಗಾಂಗ ದಾನ:ಪತ್ನಿ ಸುಧಾ ಹಾಗೂ ಪುತ್ರಿಯ ಚಿಕ್ಕ ಸಂಸಾರ ಇವರದು. ನಿತ್ಯ ಬೆಳಿಗ್ಗೆ ನಸುಕಿನಲ್ಲಿ ಕುಟುಂಬ ಸಹಿತ ವಾಯುವಿಹಾರ ನಡೆಸುವ ಹವ್ಯಾಸ ಹೊಂದಿದ್ದರು. ಬಹುದಿನಗಳಿಂದ ತುರುವನೂರು ರಸ್ತೆಯಲ್ಲೇ ವಾಯುವಿಹಾರಕ್ಕೆ ತೆರಳುತ್ತಿದ್ದರು. ಪತ್ನಿ ಹಾಗೂ ಪುತ್ರಿಯ ಕಣ್ಣೆದುರೇ ಅಪಘಾತ ಸಂಭವಿಸಿದೆ.

‘ಪ್ರಸನ್ನ ಅವರು ಅಂಗಾಂಗ ದಾನ ಮಾಡುವ ಇಚ್ಛೆ ಹೊಂದಿದ್ದರು. ಈ ಬಗ್ಗೆ ಹಲವು ಬಾರಿ ಪತ್ನಿಯೊಂದಿಗೆ ಮಾತನಾಡಿದ್ದರು. ಅವರ ಇಚ್ಛೆಯಂತೆ ಅಂಗಾಂಗ ದಾನ ಮಾಡಲಾಗಿದೆ’ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾಹಿತಿ ನೀಡಿದರು.

ಸರ್ಕಾರಿ ಗೌರವ:ಪ್ರಸನ್ನ ಅವರ ಅಂತ್ಯಕ್ರಿಯೆಗೆ ಸರ್ಕಾರ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಪೊಲೀಸ್‌ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸುವಂತೆ ಸೂಚನೆ ನೀಡಿದೆ. ಕೋವಿಡ್‌ ಮಾರ್ಗಸೂಚಿ ಪಾಲಿಸಿ ಅಂತ್ಯಕ್ರಿಯೆ ನೆರವೇರಿಸುವಂತೆ ಹೇಳಿದೆ. ಅಂತ್ಯಕ್ರಿಯೆ ಸ್ಥಳ ಇನ್ನೂ ನಿಗದಿಯಾಗಿಲ್ಲ.

ಕಂಬನಿ ಮಿಡಿದ ಕಡಬನಕಟ್ಟೆ ಜನ

ನಾಯಕನಹಟ್ಟಿ: ಉಪವಿಭಾಗಾಧಿಕಾರಿ ವಿ.ಪ್ರಸನ್ನ ಅವರ ಸಾವಿನಿಂದಾಗಿ ಸ್ವಗ್ರಾಮ ಕಡಬನಕಟ್ಟೆಯಲ್ಲಿ ನೀರವ ಮೌನ ಆವರಿಸಿದೆ.

ಕಡಬನಕಟ್ಟೆ ಗ್ರಾಮದ ಹೆಮ್ಮೆಯ ಪುತ್ರನಿಗೆ ಉನ್ನತ ಹುದ್ದೆಯಲ್ಲಿದ್ದಾಗ ಬಂದೆರಗಿದ ಅಕಾಲಿಕ ಮರಣ ಗ್ರಾಮದ ಜನರಲ್ಲಿ ನೋವು ತರಿಸಿದೆ. ಕಡಬನಕಟ್ಟೆ ಗ್ರಾಮದ ಹೊಲಗಳಲ್ಲಿ ಹೈಟೆನ್ಷನ್ ಮಾರ್ಗ ಹಾದು ಹೋಗುತ್ತಿರುವುದಕ್ಕೆ ಗ್ರಾಮಸ್ಥರು ಪರಿಹಾರಕ್ಕೆ ಒತ್ತಾಯಿಸಿದ್ದರು. ಒಂದು ವಾರದ ಹಿಂದೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ರೈತರ ಸಭೆ ನಡೆಸಿ, ಸಲಹೆಗಳನ್ನು ಪಡೆದಿದ್ದರು.

ಕಡಬನಕಟ್ಟೆ ಗ್ರಾಮದಲ್ಲಿನ ಆಂಜನೇಯ ದೇವಾಲಯ ಮತ್ತು ರಥೋತ್ಸವ ಇಡೀ ಗ್ರಾಮದ ಪ್ರಮುಖ ಧಾರ್ಮಿಕ ಆಚರಣೆಯಾಗಿದೆ. ಇತ್ತೀಚೆಗೆ ಗ್ರಾಮದಲ್ಲಿ ಜರುಗಿದ ಆಂಜನೇಯ ರಥೋತ್ಸವದಲ್ಲಿ ಪ್ರಸನ್ನ ಖುಷಿಯಿಂದ ಪಾಲ್ಗೊಂಡಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.