ಹಿರಿಯೂರು: ‘ಅತ್ಯಂತ ಹಿಂದುಳಿದ ಸಮುದಾಯವಾಗಿರುವ ಉಪ್ಪಾರರನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು. ಈ ಕುರಿತು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ’ ಎಂದು ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.
ನಗರದ ವೇದಾವತಿ ಬಡಾವಣೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಪ್ಪಾರ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಎಲ್.ಜಿ. ಹಾವನೂರು ಆಯೋಗವು ಎಸ್ಟಿಗೆ ಸೇರಿಸುವಂತೆ ವರದಿ ನೀಡಿತ್ತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಲ ಶಾಸ್ತ್ರೀಯ ಅಧ್ಯಯನ ನಡೆಸುವಂತೆ ಹಂಪಿಯ ಕನ್ನಡ ವಿ.ವಿ.ಗೆ ಜವಾಬ್ದಾರಿ ವಹಿಸಿದ್ದು, ಅ.15ರಂದು ವರದಿ ನೀಡಬೇಕಿತ್ತು. ಕೋವಿಡ್ ಕಾರಣಕ್ಕೆ ತಡವಾಗಿದೆ. ವರದಿ ಸಲ್ಲಿಸಿದ ನಂತರ ಕೇಂದ್ರಕ್ಕೆ ಕಳುಹಿಸಿ ಅನುಮೋದನೆ ಪಡೆಯಲು ಸಂಘಟಿತ ಹೋರಾಟ ನಡೆಸೋಣ’ ಎಂದು ಕರೆ ನೀಡಿದರು.
ಶಾಸಕಿ ಪೂರ್ಣಿಮಾ ಶ್ರೀನಿವಾಸ್, ‘ಉಪ್ಪಾರ ಸಮುದಾಯದ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಸಿ.ಎಂ.ಗೆ ಮನವಿ ಮಾಡುತ್ತೇನೆ. ನೂತನ ಭವನಕ್ಕೆ ಬಂದು–ಹೋಗಲು ತೊಡಕಾಗಿರುವ ದಾರಿಯ ಸಮಸ್ಯೆಯನ್ನು ಪರಿಹರಿಸಿ ಕೊಡುತ್ತೇನೆ. ಹಿಂದುಳಿದ ಉಪ್ಪಾರ ಸಮುದಾಯದ ಹಿತ ಕಾಯಲು ಬದ್ಧಳಿದ್ದೇವೆ’ ಎಂದು ಹೇಳಿದರು.
ಮಾಜಿ ಶಾಸಕ ಡಿ.ಸುಧಾಕರ್, ‘ಉಪ್ಪಾರ ಭವನ ನಿರ್ಮಾಣಕ್ಕೆ ನನ್ನ ಶಾಸಕತ್ವದ ಅವಧಿಯಲ್ಲಿ ₹ 60 ಲಕ್ಷ ಅನುದಾನ ನೀಡಿದ್ದೆ. ಸಂಕಷ್ಟದ ನಡುವೆಯೂ ಸುಂದರ ಭವನ ನಿರ್ಮಿಸಿರುವುದು ಈ ಸಮುದಾಯದ ಇಚ್ಛಾಶಕ್ತಿಯ ಪ್ರತೀಕವಾಗಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಮಾಜಿ ಅಧ್ಯಕ್ಷ ಎಂ.ಜಯಣ್ಣ, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಉಪ್ಪಾರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ಗೌರವಾಧ್ಯಕ್ಷ ಕನಕದಾಸ್, ಟ್ರಸ್ಟ್ ಅಧ್ಯಕ್ಷ ನೀಲಕಂಠಪ್ಪ, ಮುಖಂಡರಾದ ಖಾದಿ ರಮೇಶ್, ವೆಂಕಟೇಶ್, ನಟರಾಜ್, ರಾಮಣ್ಣ, ತಿಪ್ಪೇಸ್ವಾಮಿ, ನಿಂಗರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.