ADVERTISEMENT

ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಆಹಾರ ಕಿಟ್ ರವಾನೆ

ಗೋಕಾಕ ಪಟ್ಟಣಕ್ಕೆ 300 ಕಿಟ್‌ ವಿತರಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 5:12 IST
Last Updated 18 ಆಗಸ್ಟ್ 2021, 5:12 IST
ಗೋಕಾಕದ ನೆರೆ ಸಂತ್ರಸ್ತರಿಗಾಗಿ ನಾಯಕನಹಟ್ಟಿ ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಮಂಗಳವಾರ ಆಹಾರ ಕಿಟ್‌ಗಳನ್ನು ಸಂಗ್ರಹಿಸಿರುವುದು.
ಗೋಕಾಕದ ನೆರೆ ಸಂತ್ರಸ್ತರಿಗಾಗಿ ನಾಯಕನಹಟ್ಟಿ ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಮಂಗಳವಾರ ಆಹಾರ ಕಿಟ್‌ಗಳನ್ನು ಸಂಗ್ರಹಿಸಿರುವುದು.   

ನಾಯಕನಹಟ್ಟಿ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಆಹಾರದ ಕಿಟ್ ನೀಡಲು ಮುಂದಾಗಿರುವ ಮುಸ್ಲಿಂ ಸಮುದಾಯದ ಕಾರ್ಯ ಶ್ಲಾಘನೀಯ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಆಹಾರದ ಕಿಟ್ ರವಾನಿಸುವ ಕಾರ್ಯಕ್ಕೆ ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಜಾಮಿಯಾ ಮಸೀದಿ ಅಧ್ಯಕ್ಷ ಸೈಯದ್‌ ಅನ್ವರ್ ಮಾತನಾಡಿ, ‘ಜಮೀಯತ್ ಉಲಮಾ-ಎ-ಹಿಂದ್ ಮತ್ತು ಜಾಮಿಯ ಮಸೀದಿ ಸಹಯೋಗದಲ್ಲಿ ಮೂರು ದಿನಗಳಿಂದ ನಾಯಕನಹಟ್ಟಿ ಪಟ್ಟಣದಲ್ಲಿರುವ ಎಲ್ಲ ದಾನಿಗಳ ನೆರವಿನಿಂದ ಅಕ್ಕಿ, ದವಸ-ಧಾನ್ಯ, ಹಣವನ್ನು ಸಂಗ್ರಹಿಸಿ ಪ್ರಕೃತಿ ವಿಕೋಪಕ್ಕೊಳಗಾದ ಗೋಕಾಕ ಪಟ್ಟಣಕ್ಕೆ ತಲುಪಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ಒಂದು ಕುಟುಂಬಕ್ಕೆ ತಲಾ 25 ಕೆ.ಜಿ ಅಕ್ಕಿ, ಗೋಧಿ, ಬೇಳೆ, ಎಣ್ಣೆ ಸೇರಿದಂತೆ ಅಗತ್ಯ ದಿನಸಿ ವಸ್ತುಗಳನ್ನು ನೀಡಲು 300 ಕಿಟ್‌ಗಳನ್ನು ಸಂಗ್ರಹಿಸಲಾಗಿದೆ. ಅವುಗಳನ್ನು ಲಾರಿಯ ಮೂಲಕ ಗೋಕಾಕ ಪಟ್ಟಣಕ್ಕೆ ತೆಗೆದುಕೊಂಡು ಹೋಗಲಾಗುವುದು. ಗೋಕಾಕ ತಾಲ್ಲೂಕು ಆಡಳಿತ ಹೇಳುವ ಗ್ರಾಮಕ್ಕೆ ತೆರಳಿ ನಮ್ಮ ಯುವಕರು ಜಾತಿ, ಧರ್ಮ ತಾರತಮ್ಯವಿಲ್ಲದೇ ನೊಂದ ಕುಟುಂಬಗಳಿಗೆ ವಿತರಿಸುವರು’ ಎಂದು ಮಾಹಿತಿ ನೀಡಿದರು.

ADVERTISEMENT

ಆಹಾರ‌ದ ಕಿಟ್ ವಿತರಣೆ ಸಂಚಾಲಕ ಮೌಲಾನಾ ಮಹಮ್ಮದ್ ಮುಸೇಬ್, ಮೌಲಾನಾ ಸೋಹೈಬ್, ಜೆಡಿಎಸ್ ಮುಖಂಡ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಟಿ. ಕೋಡಿಭೀಮರಾಯ, ಕೆ.ಮಹಮ್ಮದ್‌ ಯೂಸೂಫ್, ಏಜಾಜ್‌ ಅಹಮ್ಮದ್, ಮಹಮ್ಮದ್‌ ರಫೀಕ್, ಅಬುಬಕ್ಕರ್‌ ಸಿದ್ದಿಕ್, ನಿಸ್ಸಾರ್‌ ಅಹಮ್ಮದ್, ಜಾಕೀರ್‌ ಹುಸೇನ್, ವಕೀಲ ಮಲ್ಲೇಶ್, ಕಂದಾಯ ನಿರೀಕ್ಷಕ ಆರ್.ಚೇತನ್‌ಕುಮಾರ್, ಉಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.