ADVERTISEMENT

ಅಮಾವಾಸ್ಯೆಗೆ ಹೆದರುವ ಅಗತ್ಯವಿಲ್ಲ: ಶಿವಮೂರ್ತಿ ಮುರುಘಾ ಶರಣರು

ಸಾಮೂಹಿಕ ಕಲ್ಯಾಣ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 13:02 IST
Last Updated 5 ಏಪ್ರಿಲ್ 2019, 13:02 IST
ಸಾಮೂಹಿಕ ಕಲ್ಯಾಣದಲ್ಲಿ ಶಿವಮೂರ್ತಿ ಮುರುಘಾ ಶರಣರು ಮಾತನಾಡಿದರು.
ಸಾಮೂಹಿಕ ಕಲ್ಯಾಣದಲ್ಲಿ ಶಿವಮೂರ್ತಿ ಮುರುಘಾ ಶರಣರು ಮಾತನಾಡಿದರು.   

ಚಿತ್ರದುರ್ಗ: ‘ಬಹಳಷ್ಟು ಜನರು ಅಮಾವಾಸ್ಯೆಗೆ ಹೆದರುತ್ತಾರೆ. ಆದರೆ, ಬಸವಾದಿ ಶರಣರು ಅಮಾವಾಸ್ಯೆಯನ್ನೇ ಹೆದರಿಸುತ್ತಾರೆ. ಹಾಗಾಗಿ, ಇದಕ್ಕೆ ಯಾರೂ ಭಯ ಪಡುವ ಅಗತ್ಯವಿಲ್ಲ’ ಎಂದು ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

ಬಸವಕೇಂದ್ರ ಮುರುಘಾಮಠದಲ್ಲಿ ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಷನ್‌ನಿಂದ ಶುಕ್ರವಾರ ಹಮ್ಮಿಕೊಂಡಿದ್ದ 29ನೇ ವರ್ಷದ 4ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ಮಠಕ್ಕೆ ವಿದ್ಯಾರ್ಥಿಗಳಾಗಿ ಬಂದು ವಿದ್ಯಾರ್ಜನೆ ಪೂರೈಸಿ, ವಿವಿಧೆಡೆ ಹುದ್ದೆಗಳನ್ನು ಪಡೆದು ಶ್ರೀಮಠದ ಜೊತೆಯಲ್ಲಿ ಸಾಗುತ್ತ ಬಂದಿರುವ ಅನೇಕರೂ ಸಾಮೂಹಿಕ ಕಲ್ಯಾಣ ಮಹೋತ್ಸವದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಜಿಲ್ಲೆಯೂ ಬರದ ನಾಡಾಗಿದೆ. ಇಲ್ಲಿ ಸಮರ್ಪಕವಾಗಿ ಮಳೆಯಾಗುತ್ತಿಲ್ಲ. ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ನೀರಾವರಿ ಸೌಲಭ್ಯಕ್ಕಾಗಿ ಹೋರಾಟಗಳನ್ನು ಮಾಡಲಾಗುತ್ತಿದೆ. ಹೀಗಿರುವಾಗ ಈ ನಾಡಿನಲ್ಲಿ ನಡೆಯುತ್ತಿರುವ ಸರಳ ಸಾಮೂಹಿಕ ಕಲ್ಯಾಣ ಒಂದು ವರವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಅಮಾವಾಸ್ಯೆ ಹಾಗೂ ಯುಗಾದಿ ಹಬ್ಬ ಬಂದಿರುವುದರಿಂದ ವಿವಾಹ ಆಗುವಂಥ ಜೋಡಿಗಳ ಸಂಖ್ಯೆ ಕಡಿಮೆಯಾಗಿದೆ. ಆದರೂ ಇಲ್ಲಿ ಮದುವೆ ಆಗುತ್ತಿರುವವರು, ನೆರೆದಿರುವವರು ಕಾಯಕ ಮಾಡಬೇಕು. ಹಸಿದವನಿಗೆ ಅನ್ನ ನೀಡಬೇಕು’ ಎಂದು ಸಲಹೆ ನೀಡಿದರು.

‘ಅಭಿವೃದ್ಧಿ ಮತ್ತು ಆಧ್ಯಾತ್ಮ ಜೊತೆ ಜೊತೆಯಾಗಿ ಸಾಗಬೇಕು. ಪ್ರಗತಿಯ ಮಾರ್ಗದಲ್ಲಿ ಕರೆದೊಯ್ಯುವುದೇ ಕಲ್ಯಾಣ’ ಎಂದ ಅವರು, ‘ತಪ್ಪದೇ ಅರ್ಹರೆಲ್ಲರೂ ಮತ ಚಲಾಯಿಸಿ. ಹಣಕ್ಕಾಗಿ ಓಟು ಮಾರಿಕೊಳ್ಳಬೇಡಿ’ ಎಂದರು.

ಮೇದಾರ ಗುರುಪೀಠದ ಬಸವ ಇಮ್ಮಡಿ ಮೇದಾರ ಕೇತೇಶ್ವರ ಸ್ವಾಮೀಜಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಕೆಇಬಿ ಷಣ್ಮುಖಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಎನ್. ತಿಪ್ಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.