ಮೊಳಕಾಲ್ಮುರು: ಮದುವೆ ಸೇರಿದಂತೆ ಶುಭ ಕಾರ್ಯಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಗ್ರಾಮೀಣ ಆರ್ಕೆಸ್ಟ್ರಾ ಕಲಾವಿದರ ಬದುಕು ಕೊರೊನಾ ಕಾರಣ ಬೀದಿಗೆ ಬಿದ್ದಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿ ಸಣ್ಣಪುಟ್ಟ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುವ ಜತೆಗೆ ಜಾತ್ರೆ, ಗಣಪತಿ ಹಬ್ಬ, ಬೀದಿನಾಟಕ, ಯಕ್ಷಗಾನ, ಬಯಲು ನಾಟಕಗಳಲ್ಲಿ ಹಾಡಿ ಕಲಾವಿದರು ಜೀವನ ಕಟ್ಟಿಕೊಂಡಿದ್ದರು. ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕಿನಲ್ಲಿ ಇಂತಹ 25ಕ್ಕೂ ಹೆಚ್ಚು ತಂಡಗಳು ಇವೆ.
‘ತಾಲ್ಲೂಕಿನ ಸಂಗೀತ ಕಲಾವಿದರ ತಂಡವೊಂದರ ಸದಸ್ಯರಲ್ಲಿ ಒಬ್ಬರು ಚಿತ್ರದುರ್ಗದಲ್ಲಿ ಕಟ್ಟಡಕ್ಕೆ ಸುಣ್ಣ- ಬಣ್ಣ ಬಳಿಯುವ ಕೆಲಸ ಹೋಗುತ್ತಿದ್ದಾರೆ. ಮತ್ತೊಬ್ಬರು ಪೂರ್ವಿಕರ ವೃತ್ತಿ ಎಂದು ಕಲ್ಲು ಒಡೆಯುವ ಕೆಲಸಕ್ಕೆ ಹೋಗುತ್ತಿದ್ದಾರೆ. ಮತ್ತೊಬ್ಬ
ಯುವತಿ ಖಾನಾಹೊಸಹಳ್ಳಿಯಲ್ಲಿ ಹತ್ತಿ ಬಿಡಿಸಲು ಕೂಲಿ ಕೆಲಸಕ್ಕೆ ಹೊಗುತ್ತಿದ್ದಾರೆ’ ಎಂದು ಸಂಗೀತ
ಶಿಕ್ಷಕ ಕೆ.ಒ.ಶಿವಣ್ಣ ಅಳಲು ತೋಡಿಕೊಂಡರು.
‘ಕೊರೊನಾ ಸಂಕಷ್ಟ ಎದುರಾದ ನಂತರ ಮದುವೆ ಕಾರ್ಯಗಳು ಅದ್ದೂರಿಯಾಗಿ ನಡೆಯುತ್ತಿಲ್ಲ. ಸೂರ್ಯ ಉದಯಕ್ಕೂ ಮುನ್ನ ಮಹೂರ್ತ ಮುಗಿದು ಹೋಗಿರುತ್ತದೆ. ಆಡಂಬರ ಮಾಯವಾಗಿದೆ. ಈ ಪರಿಸ್ಥಿತಿಯಲ್ಲಿ ಕಲಾವಿದರನ್ನು ಕರೆಸಿ ಆರ್ಕೆಸ್ಟ್ರಾ ಯಾರು ಮಾಡಿಸುತ್ತಾರೆ. ಯುವ ಕಲಾವಿದರು ಬೇರೆ ಕೆಲಸ ಮಾಡಿ ತುಸು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಮಧ್ಯ ವಯಸ್ಸು ದಾಟಿರುವ ಕಲಾವಿದರು ಬೇರೆ ದಾರಿ ತೋಚದೆ ಒದ್ದಾಡುತ್ತಿದ್ದಾರೆ. ಅನಾರೋಗ್ಯ ಸಮಸ್ಯೆ ಕಾಡುತ್ತಿರುವವರ ಪಾಡು ಹೇಳತೀರದು’ ಎಂದು ಬೇಸರ ವ್ಯಕ್ತಪಡಿಸಿದರು.
ಕಲಾವಿದರ ವೇದಿಕೆ ಜಿಲ್ಲಾ ಕಾರ್ಯದರ್ಶಿ ಡಿ.ಒ.ಮೊರಾರ್ಜಿ, ‘ಕೊರೊನಾ ಸಂಕಷ್ಟ ಎದುರಾದ ನಂತರ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾ ತಂಡಗಳಿಗೆ ವಾರ್ಷಿಕ ನೀಡುತ್ತಿದ್ದ ಕಾರ್ಯಕ್ರಮಗಳನ್ನು ಸ್ಥಗಿತ ಮಾಡಿದೆ. ಅಕ್ಷರಶಃ ಕಲಾವಿದರ ಬದುಕು ಬೀದಿಗೆ ಬಿದ್ದಿದೆ. ಅನ್ನಭಾಗ್ಯ ಯೋಜನೆ ಕೆಲವರ ಹೊಟ್ಟೆ ತುಂಬಿಸಿದೆ. ಬೇರೆ ಯಾವುದೇ ಮೂಲದಿಂದಲೂ ನಯಾಪೈಸೆ ಸಿಗುತ್ತಿಲ್ಲ. ಸಂಸ್ಕೃತಿ ಇಲಾಖೆ ಒಂದಷ್ಟು ಮೊತ್ತವನ್ನು ಕಲಾವಿದರ ನೆರವಿಗೆ ನೀಡಬಹುದಾಗಿತ್ತು’ ಎನ್ನುವರು.
ಜಿಲ್ಲಾಡಳಿತ ಕಲಾವಿದರ ವಾಸ್ತವ ಪರಿಸ್ಥಿತಿಯನ್ನು ಸರ್ಕಾರಕ್ಕೆ ವರದಿ ಮಾಡುವ ಮೂಲಕ ನೆರವಿಗೆ ಬರಬೇಕು ಎಂದು ಕಲಾವಿದರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.