ಹೊಸದುರ್ಗ: ಬಂಜಾರ ಸಮದಾಯ ಭವನಕ್ಕೆ ಮೂಲ ಸೌಕರ್ಯ ₹ 25 ಲಕ್ಷ ಅನುದಾನ ನೀಡಲಾಗುವುದು ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಭರವಸೆ ನೀಡಿದರು.
ತಾಲ್ಲೂಕು ಬಂಜಾರ ಸಮಾಜ, ಯುವಕರ ಸಂಘ, ಬಂಜಾರ ನೌಕರರ ಸಂಘದ ಸಹಯೋಗದಲ್ಲಿ ಪಟ್ಟಣದ ಬಂಜಾರ ಭವನದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸೇವಾಲಾಲ್ ಮಹಾರಾಜರ 285ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮುದಾಯದವರು ನನಗೆ ಹೆಚ್ಚಿನ ಮತ ನೀಡಿದ್ದು, ಜವಬ್ದಾರಿಯನ್ನು ಹೆಚ್ಚಿಸಿದ್ದಾರೆ. ಸಮುದಾಯದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುವೆ. ಪ್ರತಿ ತಾಂಡಾಗಳಲ್ಲಿ ಸೇವಾಲಾಲ್ ದೇವಾಲಯ ನಿರ್ಮಾಣಕ್ಕೆ ₹ 1 ಕೋಟಿ ನೀಡಲಾಗಿದೆ. ತಾಂಡಾಗಳಲ್ಲಿ ಸಿಸಿ ರಸ್ತೆ ನಿರ್ಮಾಣ, ಬಡವರಿಗೆ ನಿವೇಶನ ನೀಡಿ ಮನೆ ನಿರ್ಮಿಸುವುದು, ಗಂಗಾ ಕಲ್ಯಾಣ ಯೋಜನೆ ಸೌಲಭ್ಯ, ನಿಯಮಾನುಸಾರ ಭೂಮಿ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಒಳಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಚಿತ್ರದುರ್ಗದ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಒತ್ತಾಯಿಸಿದರು.
ಸೇವಲಾಲ್ ಭಾವಚಿತ್ರದ ಮೆರವಣಿಗೆ ಪಟ್ಟಣದ ಟಿ.ಬಿ ವೃತ್ತದಲ್ಲಿ ಆರಂಭವಾಗಿ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ವೀರಭದ್ರೇಶ್ವರ ಸ್ವಾಮಿ ದೇವಾಲಯದ ಮಾರ್ಗವಾಗಿ ಬಂಜಾರ ಸಮುದಾಯ ಭವನ ತಲುಪಿತು. ಈ ವೇಳೆ ಸಮುದಾಯದವರು ಕುಣಿದು ಕುಪ್ಪಳಿಸಿದರು.
ಬಂಜಾರ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮನಾಯ್ಕ ಕೆ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಿಲ್ಲಾ ಉಪಕಾರ್ಯದರ್ಶಿ ಎಚ್. ಕೃಷ್ಣನಾಯ್ಕ, ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಂದ್ರ ಪ್ರಸಾದ್ ನಾಯ್ಕ, ಮುಖಂಡರಾದ ಈಶ್ವರನಾಯ್ಕ, ಜಯರಾಂನಾಯ್ಕ, ರಾಮನಾಯ್ಕ, ಕಮಲನಾಯ್ಕ, ಜಯದೇವನಾಯ್ಕ, ನಟರಾಜ್ನಾಯ್ಕ, ರಾಜಕುಮಾರ್ ನಾಯ್ಕ, ಪುಷ್ಪ ಪ್ರವೀಣ್, ಪಾಪಾನಾಯ್ಕ, ಗಣೇಶ್ ನಾಯ್ಕ, ಲಕ್ಷ್ಮಣ್ ನಾಯ್ಕ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.