ADVERTISEMENT

ಪಾದಯಾತ್ರೆ ನಡೆಸುತ್ತಿರುವ ಸ್ವಾಮೀಜಿ ಮನವೊಲಿಕೆ ಪ್ರಯತ್ನ

ಸಚಿವ ಮುರುಗೇಶ್ ನಿರಾಣಿ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನಡುವೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 7:21 IST
Last Updated 4 ಫೆಬ್ರುವರಿ 2021, 7:21 IST
   

ಚಿತ್ರದುರ್ಗ: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ನಡೆಸುತ್ತಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಚನಾನಂದ ಸ್ವಾಮೀಜಿ ಅವರ ಮನವೊಲಿಸುವ ಪ್ರಯತ್ನ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ನಡೆಯುತ್ತಿದೆ.

ಹಿರಿಯೂರು ತಾಲ್ಲೂಕಿನ ಐಮಂಗಲದಲ್ಲಿ ಇದ್ದ ಪಾದಯಾತ್ರೆ ಸ್ಥಳಕ್ಕೆ ಆಗಮಿಸಿದ ಸಚಿವರೊಂದಿಗೆ ಸಿ.ಸಿ.ಪಾಟೀಲ್, ಶಾಸಕ ಮಹೇಶ್ ಕುಮಠಳ್ಳಿ, ಅರವಿಂದ ಬೆಲ್ಲದ ಇದ್ದಾರೆ.

'ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹಾಗೂ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದಾರೆ. ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಸ್ವಾಮೀಜಿ ಅವರ ಬೇಡಿಕೆಯ ಪ್ರಸ್ತಾವನೆಯನ್ನ ಹಿಂದುಳಿದ ವರ್ಗಗಳ ಆಯೋಗಕ್ಕೆ ನೀಡಲು ಸಿಎಂ ಒಪ್ಪಿದ್ದಾರೆ' ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ADVERTISEMENT

ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ರಾಜಕಾರಣಕ್ಕೆ ಪಾದಯಾತ್ರೆ ಬಳಸಿಕೊಳ್ಳಬೇಡಿ. ನಮಗೂ ಸಮಾಜದ ಬಗ್ಗೆ ಕಾಳಜಿ ಇದೆ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ನಿದ್ದೆ ಮಾಡುತ್ತಿಲ್ಲ. ಬೇರೆ ಸಮುದಾಯಕ್ಕೆ ಹೋಲಿಕೆ ಮಾಡಿದರೆ ಪಂಚಮಸಾಲಿಗಳಿಗೆ ಖಂಡಿತ ಅನ್ಯಾಯ ಆಗಿದೆ. ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸೋಣ ಎಂದರು.

ಸಭೆ ಆರಂಭಕ್ಕೂ ಮೊದಲೇ ಸಚಿವ ಮುರುಗೇಶ್ ನಿರಾಣಿ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನಡುವೆ ವಾಗ್ವಾದ ನಡೆಯಿತು. ನಿರಾಣಿ ಹಾಕಿದ ಹೂಹಾರವನ್ನು ಕಾಶಪ್ಪನವರ್ ಕಿತ್ತು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.