ADVERTISEMENT

ಸತ್ಯಶುದ್ಧವಾಗಿ ಸರಳ ಜೀವನ ನಡೆಸಿ: ಬಸವ ಮುರುಘೇಂದ್ರ ಸ್ವಾಮೀಜಿ ಸಲಹೆ

ಮುರುಘಾ ಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ; ಬಸವ ಮುರುಘೇಂದ್ರ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 6:16 IST
Last Updated 6 ಅಕ್ಟೋಬರ್ 2025, 6:16 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಭಾನುವಾರ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಿತು
ಚಿತ್ರದುರ್ಗದ ಮುರುಘಾ ಮಠದಲ್ಲಿ ಭಾನುವಾರ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಿತು   

ಚಿತ್ರದುರ್ಗ: ‘ವಧು- ವರರು ಬಸವಾದಿ ಪ್ರಮಥರ ಆಶಯದಂತೆ ಸತ್ಯಶುದ್ಧವಾಗಿ ಸರಳ ಜೀವನ ಮಾಡಬೇಕು. ಕಾಯಕ ನಿರ್ವಹಿಸುತ್ತ ನೆಮ್ಮದಿ ಕಾಣಬೇಕು’ ಎಂದು ಶ್ರೀ ಮಠದ ಬಸವ ಮುರುಘೇಂದ್ರ ಸ್ವಾಮೀಜಿ ತಿಳಿಸಿದರು.

ನಗರದ ಮುರುಘಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ 31ನೇ ವರ್ಷದ 10ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ಮದುವೆ ಎಂಬುದು ಕೇವಲ ವ್ಯವಹಾರಿಕವಲ್ಲ. ಎರಡು ಸಂಬಂಧಗಳನ್ನು ಒಟ್ಟುಗೂಡಿಸುವುದು’ ಎಂದರು.

‘ಬಸವಣ್ಣನವರು ಹೇಳುವಂತೆ ಸತಿ- ಪತಿ ಒಂದಾಗಿ ನಡೆಯಬೇಕು. ಗಂಡ- ಹೆಂಡತಿಯರು ಜ್ಞಾನದ ಜ್ಯೋತಿಯಾಗಿ ಬೆಳಗಬೇಕು. ಅದಕ್ಕೆ ಪ್ರೀತಿಯೆಂಬ ತೈಲವನ್ನು ಹಾಕಿದರೆ ಮಾತ್ರ ಬೆಳಕು ಚೆಲ್ಲುತ್ತದೆ’ ಎಂದು ತಿಳಿಸಿದರು.

ADVERTISEMENT

‘ಇದು ದುಬಾರಿ ಕಾಲ. ಬಡವರು ಮದುವೆ ಮಾಡುವುದು ಕಷ್ಟವಾಗಿದೆ. ಹಾಗಾಗಿ ಇಂಥವರಿಗೆ ಶ್ರೀಮಠವು ಸಾಮೂಹಿಕ ಕಲ್ಯಾಣದ ಮೂಲಕ ಸಹಕಾರಿಯಾಗಿದೆ’ ಎಂದರು.

‘ವಧು– ವರರು ತಂದೆ- ತಾಯಿಗಳನ್ನು ಕುಲದೈವ ಎಂದು ಭಾವಿಸಬೇಕು. ಮರ್ಯಾದೆ, ಮಾತಿಗೆ ಅಂಜಿ ಕೆಲವರು ಸಾಲ ಮಾಡಿ ಮದುವೆ ಮಾಡಿ ಸಾಲದ ಕೂಪಕ್ಕೆ ಸಿಲುಕುತ್ತಾರೆ. ಸರಳವಾಗಿ ಬದುಕು, ಸಹಜ ವರ್ತನೆ ನಿಮ್ಮೆಲ್ಲರದಾಗಿರಲಿ’ ಎಂದು ತಿಳಿಸಿದರು.

‘ಮದುವೆ ಅಂದರೆ ಗಲಾಟೆ, ಗದ್ದಲ, ಆಡಂಬರ, ದುಂದುವೆಚ್ಚ, ವೈಭವದ ಭೋಜನಾದಿಗಳನ್ನು ಮಾಡುವುದನ್ನು ನಾವು ಕಾಣುತ್ತೇವೆ. ಆದರೆ ಮುರುಘಾಮಠದಲ್ಲಿ ನಡೆಯುವ ಸಾಮೂಹಿಕ ಕಲ್ಯಾಣ ಮಹೋತ್ಸವ ಅತ್ಯಂತ ಸರಳವಾಗಿ ನಡೆಯುತ್ತದೆ’ ಎಂದು ಬಂಜಾರ ಗುರುಪೀಠದ ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ ಹೇಳಿದರು.

‘ಜಾತಿ, ವರ್ಣ, ವರ್ಗಭೇದ ರಹಿತವಾಗಿ ಒಂದೇ ವೇದಿಕೆಯಲ್ಲಿ ದಾಂಪತ್ಯಕ್ಕೆ ಕಾಲಿಡುವುದು ಪುಣ್ಯದ ಕಾರ್ಯ. ಬಯಲು ಸೀಮೆ ಜನರಿಗೆ ಈ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ. ಈ ವೇದಿಕೆಯಲ್ಲಿ ಸತಿ– ಪತಿಗಳಾದವರು ಸಾಮಾಜಿಕ ಮೌಲ್ಯದೊಂದಿಗೆ ಜೀವನ ಸಾಗಿಸಲು ಮಾರ್ಗದರ್ಶನ ಪಡೆಯುತ್ತಾರೆ’ ಎಂದರು.

‘ಮುರುಘಾಮಠವು ನಾಡಿನಲ್ಲಿ ತ್ರಿವಿಧ ದಾಸೋಹಕ್ಕೆ ಹೆಸರಾಗಿದೆ. ಮಠದಲ್ಲಿ ಜ್ಞಾನ, ಅನ್ನದಾಸೋಹ ನಿರಂತರವಾಗಿ ಈ ರೀತಿಯ ಕಾರ್ಯಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ’ ಎಂದು ನಿಪ್ಪಾಣಿ ವಿರಕ್ತ ಮಠದ ಬಸವ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.

6 ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದರು. ದಾವಣಗೆರೆಯ ರಂಗಭೂಮಿ ಕಲಾವಿದೆ ಜಿ.ಉಮಾಶ್ರೀ ಅವರನ್ನು ಸನ್ಮಾನಿಸಲಾಯಿತು. ಭಕ್ತರಾದ ಗಿರೀಶಾಚಾರ್‌, ಪೈಲ್ವಾನ್‌ ತಿಪ್ಪೇಸ್ವಾಮಿ, ಟಿ.ಪಿ.ಜ್ಞಾನಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.