
ಸೊರಬ: ‘ಹಿರಿಯರು ಪಾರಂಪರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಮಗೆ ಬಳುವಳಿಯಾಗಿ ನೀಡಿದ ಬಯಲಾಟದ ಕಲೆಗೆ ಅಪಾರವಾದ ಮಹತ್ವವಿದೆ. ಇದು ನಮ್ಮ ಮಣ್ಣಿನ ಜೀವಂತ ಸಂಸ್ಕೃತಿಯಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಕುಮಾರ್ ಪಾಟೀಲ್ ಹೇಳಿದರು.
ತಾಲ್ಲೂಕಿನ ಹೊಳೆಮರೂರು ಗ್ರಾಮದಲ್ಲಿ ಗಜಾನನ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬಯಲಾಟದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬಯಲಾಟ ಎಂಬುವುದು ಕೇವಲ ಒಂದು ಪ್ರದರ್ಶನವಲ್ಲ, ಅದು ಹತ್ತು ಹಲವಾರು ಕಲೆಗಳ ಸುಂದರ ಸಂಗಮವಾಗಿದೆ. ಸರ್ಕಾರವು ಜನಪದ ಕಲೆಗಳ ಅಭಿವೃದ್ಧಿಗಾಗಿ ಪ್ರತ್ಯೇಕ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಪ್ರೋತ್ಸಾಹ ನೀಡುತ್ತಿದೆ. ಮುಖ್ಯವಾಗಿ ಭಾಗವತರ ಮಾರ್ಗದರ್ಶನದಲ್ಲಿ ಕಲೆಗಳು ಅತ್ಯಂತ ಸುಂದರವಾಗಿ ಮೂಡಿಬರಲು ಸಾಧ್ಯ, ಪೌರಾಣಿಕ ಪಾತ್ರಗಳಿಗೆ ಕಲಾವಿದರು ಜೀವ ತುಂಬಿದಾಗ ನಮ್ಮ ಪರಂಪರೆಗೆ ಹೊಸ ಕಳೆ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ನಾಡಿನ ಶ್ರೇಷ್ಠ ಪರಂಪರೆಯ ಭಾಗವತಿಕೆ ಮತ್ತು ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವುದು ಇಂದಿನ ತಲೆಮಾರಿನ ಕರ್ತವ್ಯವಾಗಿದೆ. ಮಾಜಿ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪ ಅವರು ಗ್ರಾಮೀಣ ಕಲಾವಿದರು ಮತ್ತು ಭಾಗವತರನ್ನು ಗುರುತಿಸಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ರಾಜ್ಯದಲ್ಲಿ ದೊಡ್ಡ ಸಾಂಸ್ಕೃತಿಕ ಕ್ರಾಂತಿಯನ್ನೇ ಮಾಡಿದ್ದಾರೆ’ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ವಿ ಗೌಡ ತಿಳಿಸಿದರು.
ಮುಖ್ಯ ಶಿಕ್ಷಕ ಎಚ್.ಎಸ್. ಪ್ರಭಾಕರ್ ಮಾತನಾಡಿದರು. ಹಿರಿಯ ಭಾಗವತ ಚಂದ್ರಪ್ಪ ದ್ಯಾವಪ್ಪ, ಸಂಘದ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್, ಪ್ರಮುಖರಾದ ಅರುಣ್ ಕುಮಾರ್ ಗೌಡ ಕಡಸೂರು, ದಾನಶೇಖರ್ ಪಾಟೀಲ್, ಎ.ಕೆ. ಗಂಗಾಧರ್, ಜಗದೀಶ್, ಶಿಕ್ಷಕ ಎಚ್.ಎಸ್. ಪ್ರಭಾಕರ್, ಜಯರಾಮ್ ಜೋಗಳೇಕರ್, ಹರೀಶ್ ಗೌಡ, ಶಿವಮೂರ್ತಿ ಗೌಡ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.