ಹೊಸದುರ್ಗ: ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ನ.1ರಿಂದ 7ರವರೆಗೆ ಆಯೋಜಿಸಿರುವ 2020ರ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವಕ್ಕೆ ಭಾನುವಾರ ಬೆಳಿಗ್ಗೆ ಶಿವಧ್ವಜಾರೋಹಣ ಮಾಡುವ ಮೂಲಕ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
‘ಮನುಷ್ಯ ವಿಪತ್ತುಗಳು, ಸಂಕಟಗಳು, ಪರಿಸ್ಥಿತಿ ಬಿಗಡಾಸಿದಾಗಲೂ ವಿವೇಕಿಯಾಗಿ, ಸಕಾರಾತ್ಮಕವಾಗಿ ಚಿಂತನೆ ಮಾಡಬೇಕು. ಆತ್ಮಕಲ್ಯಾಣ ಮತ್ತು ಲೋಕಕಲ್ಯಾಣವನ್ನು ಸಾಧಿಸಬೇಕು. ಈ ಹಿನ್ನೆಲೆಯಲ್ಲಿಯೇ ಪ್ರತಿವರ್ಷ ನಾಟಕೋತ್ಸವ ಆಯೋಜಿಸಲಾಗುತ್ತಿದೆ. ಪ್ರಾರ್ಥನೆ ಬದುಕಿಗೆ ಶಕ್ತಿ ತಂದುಕೊಡುತ್ತದೆ. ಮನಸ್ಸಿನ ಕಲುಷಿತ ಭಾವನೆಗಳನ್ನು ಕಳೆದು ಮನೋವೈಶಾಲ್ಯತೆ ಬೆಳೆಸುತ್ತದೆ’ ಎಂದು ಹೇಳಿದರು.
‘ಮನುಷ್ಯ ಪ್ರಾರ್ಥನೆ ಮೂಲಕ ಬುದ್ಧಿಗೆ ಬೆಳಕನ್ನು ಕಂಡುಕೊಳ್ಳುವ ಅವಶ್ಯಕತೆಯಿದೆ. ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಶಿಕ್ಷಣ, ಸಮಾಜಸೇವೆ, ಕೃಷಿ, ಸಾಹಿತ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ‘ಆದಿಕವಿ’ ಪ್ರಶಸ್ತಿ ನೀಡಿ ಗೌರವಿಸು ತ್ತಿರುವುದು ಅತ್ಯಂತ ಸಂತೋಷದ ಸಂಗತಿ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅಧ್ಯಾಪಕಿ ಪಿ.ಎಲ್.ಸಂಧ್ಯಾ, ‘ಮಹಿಳೆಯರು ಮತ್ತು ಸಾಮಾಜಿಕ ಜವಾಬ್ದಾರಿ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಕನ್ನಡ ಧ್ವಜಾರೋಹಣ ನೆರವೇರಿಸಿದ ಹೊಸ ದುರ್ಗದ ಸಮಾಜಸೇವಕ ಕೆ.ಎಸ್.ಕಲ್ಮಠ್ ಮಾತನಾಡಿದರು.
ಆರಂಭದಲ್ಲಿ ಶಿವಸಂಚಾರದ ನಾಗರಾಜ್ ಸಾಣೇಹಳ್ಳಿ, ವಿದ್ಯಾರ್ಥಿಗಳಾದ ಸುಪ್ರಭೆ ಮತ್ತು ಮುಕ್ತಾ ಅವರು ಸಾಮೂಹಿಕ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶಿವಮಂತ್ರ ಲೇಖನ ಬರೆಯಲಾಯಿತು. ಅಧ್ಯಾಪಕ ಸಂತೋಷ್ ಕಾರ್ಯಕ್ರಮ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.