
ಸಿರಿಗೆರೆ: ಅದಿರು ಲಾರಿಗಳ ಓಡಾಟ ನಿಲ್ಲಿಸಲು ಹೋರಾಟ ಮಾಡುತ್ತಿದ್ದ ಭೀಮಸಮುದ್ರದ ಜನರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
ಸಮೀಪದ ಹಿರೇಕಂದವಾಡಿ ಗುಡ್ಡದಲ್ಲಿ ತೆಗೆಯುವ ಗಣಿಗಾರಿಕೆ ಅದಿರು ಸಾಗಿಸಲು ನೂರಾರು ಬೃಹತ್ ಟ್ರಿಪ್ಪರ್ಗಳು ನಿತ್ಯವೂ ವಿ. ಪಾಳ್ಯದ ಮೂಲಕ ಭೀಮಸಮುದ್ರ ಗ್ರಾಮದ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಗಣಿ ದೂಳಿನಿಂದ ಸುತ್ತಲ ಊರುಗಳಲ್ಲೆಲ್ಲಾ ವಾತಾವರಣ ಕಲುಷಿತಗೊಂಡಿತ್ತು.
ಗ್ರಾಮದಲ್ಲಿನ ಮುಖ್ಯ ರಸ್ತೆಯಲ್ಲಿರುವ ಹೋಟೆಲ್ಗಳು, ಬೇಕರಿ ಅಂಗಡಿಗಳ ಆಹಾರದ ಮೇಲೆ ದೂಳಿನ ಅಂಶ ಬೆರೆತು ಆರೋಗ್ಯ ಸಮಸ್ಯೆ ತೀವ್ರವಾಗಿ ಕಾಡುತ್ತಿತ್ತು. ಮಕ್ಕಳು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ಏರ್ಪಟ್ಟಿತ್ತು.
ಲಾರಿಗಳ ಓಡಾಟದ ವೇಳೆ ದ್ವಿಚಕ್ರ ವಾಹನ ಸವಾರರು ಅಪಘಾತಗಳಿಗೆ ಈಡಾಗಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಮೈನಿಂಗ್ ಲಾರಿಗಳ ಓಡಾಟವನ್ನು ನಿರ್ಬಂಧಿಸಬೇಕೆಂದು ಸತತ ಹೋರಾಟ ನಡೆಯಿತು. ಇತ್ತೀಚಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮೈನಿಂಗ್ ಲಾರಿಗಳ ಓಡಾಟ ನಿಲ್ಲಿಸುವಂತೆ ಆಗ್ರಹಿಸಿದ್ದರು.
ಗ್ರಾಮಸ್ಥರ ಆಕ್ರೋಶವನ್ನು ಗಣನೆಗೆ ತೆಗೆದುಕೊಂಡಿರುವ ಅದಿರು ಸಂಸ್ಥೆಗಳು ಅದಿರು ವಲಯದಲ್ಲಿನ ಖಾಸಗಿ ರೈಲ್ವೆ ಟ್ರ್ಯಾಕ್ ಮೂಲಕ ಅದಿರು ಸಾಗಿಸಲು ಮುಂದಾಗಿರುವುದರಿಂದ ಭೀಮಸಮುದ್ರ ಕಳೆದ ಎರಡು ದಿನಗಳಿಂದ ದೂಳಿನಿಂದ ಹೊರಬರುವ ಯತ್ನ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.