ADVERTISEMENT

ಜಾತಿ ಕೈಬಿಟ್ಟಿಲ್ಲ; ಗೊಂದಲ ಸೃಷ್ಟಿಸಬೇಡಿ

ಇಂದಿನಿಂದ ಪತ್ರ ಚಳವಳಿ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 11:06 IST
Last Updated 9 ಜೂನ್ 2020, 11:06 IST
ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ   

ಚಿತ್ರದುರ್ಗ: ‘ಭೋವಿ, ಲಂಬಾಣಿ, ಕೊರಮ ಹಾಗೂ ಕೊರಚ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಟ್ಟಿಲ್ಲ. ಈ ಕುರಿತು ಅನಗತ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲ ಸೃಷ್ಟಿಸಬೇಡಿ’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

‘ಈ ನಾಲ್ಕು ಸಮುದಾಯಗಳನ್ನು ಪಟ್ಟಿಯಿಂದ ಕೈಬಿಡುವ ವಿಚಾರವಾಗಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿ ಸಂಬಂಧ ವಿಚಾರಣೆ ನಡೆಸಲಾಗಿದ್ದು, ಇದು ನ್ಯಾಯಾಲಯದಲ್ಲಿ ತೀರ್ಮಾನವಾಗುವ ವಿಚಾರವಲ್ಲ. ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ (ಎನ್‌ಸಿಎಸ್‌ಸಿ) ಮುಂದೆ ಹಾಜರಾಗಲು ಸಲ್ಲಿಸಿದವರಿಗೆ ಸೂಚಿಸಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಜಾತಿಗಳನ್ನು ಪಟ್ಟಿಗೆ ಸೇರಿಸುವುದು, ಕೈಬಿಡುವುದು ಸಂವಿಧಾನದ ಮೂಲಕ ಕಾನೂನಾತ್ಮಕವಾಗಿ ನಡೆಯಬೇಕು. ಸಂಸತ್ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಅದಕ್ಕಾಗಿ ಆಯೋಗವೂ ರಾಜ್ಯ ಸರ್ಕಾರಕ್ಕೆ ನಿಮ್ಮ ಅಭಿಪ್ರಾಯ ಅಥವಾ ವಿವರಣೆ ನೀಡಿ ಎಂದು ಕೇಳಿದೆಯೇ ಹೊರತು ಕೈಬಿಟ್ಟಿಲ್ಲ’ ಎಂದರು.

ADVERTISEMENT

‘ನ್ಯಾಯಾಲಯದ ವಿಚಾರಣೆ ಪೂರ್ಣಗೊಂಡಿದ್ದರೂ ಕೆಲವರು ಪಟ್ಟಿಯಿಂದಲೇ ಕೈಬಿಡುವಂತೆ ಆದೇಶ ನೀಡಿದೆ ಎಂದು ತಪ್ಪು ಮಾಹಿತಿ ಹರಿಬಿಟ್ಟು ಪರಿಶಿಷ್ಟ ಜಾತಿಯೊಳಗೆ ಸಂಘರ್ಷ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಸರ್ಕಾರದಿಂದ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಡ ಹೇರಲಾಗುವುದು’ ಎಂದು ಹೇಳಿದರು.

25 ಲಕ್ಷ ಕರಪತ್ರ ಮುದ್ರಣ: ‘ಅಪ್ರಬುದ್ಧ ಕೆಲ ಅಧಿಕಾರಿಗಳ ಕಣ್ತಪ್ಪಿನಿಂದಾಗಿ ರಾಜ್ಯದಲ್ಲಿ ತಪ್ಪು ಸಂದೇಶ ರವಾನೆಯಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಯಾವ ಕಾರಣಕ್ಕೂ ಕೈಬಿಡದಂತೆ ಜೂನ್ 10ರಿಂದ ರಾಜ್ಯದಾದ್ಯಂತ ಏಕಕಾಲದಲ್ಲಿ ಮೀಸಲಾತಿ ಸಂರಕ್ಷಣೆ ಒಕ್ಕೂಟದ ಮೂಲಕ ಪತ್ರ ಚಳವಳಿ ನಡೆಸಲಿದ್ದೇವೆ. ಅದಕ್ಕಾಗಿ 25ಲಕ್ಷ ಕರಪತ್ರ ಮುದ್ರಿಸಲಾಗಿದೆ’ ಎಂದು ತಿಳಿಸಿದರು.

‘ಭೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯಗಳು ಔದ್ಯೋಗಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಪರಿಶಿಷ್ಟ ಜಾತಿಯೊಳಗಿನ 101 ಉಪಜಾತಿಗಳಿಗಿಂತಲೂ ಹಿಂದುಳಿದಿದ್ದೇವೆ. ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಸಮಾಜದ ಮುಖ್ಯವಾಹಿನಿಗೂ ಬಂದಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿ ಅವರೊಂದಿಗೂ ಚರ್ಚಿಸಲಾಗಿದ್ದು, ಕೈಬಿಡದಂತೆ ಒತ್ತಾಯಿಸಲು ಮನವಿ ಮಾಡಲಾಗಿದೆ’ ಎಂದು ವಿವರಿಸಿದರು.

ಬಂಜಾರ ಸಮುದಾಯದ ಮುಖಂಡ ರಾಘವೇಂದ್ರ ನಾಯ್ಕ, ಕೊರಮ-ಕೊರಚ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ವೈ. ಕುಮಾರ, ಭೋವಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಚ್. ಲಕ್ಷ್ಮಣ್, ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.