ADVERTISEMENT

‘ಬಿಸಿಯೂಟ ಯೋಜನೆ ವಾಜಪೇಯಿ ಕನಸು’

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 5:50 IST
Last Updated 15 ಜನವರಿ 2023, 5:50 IST
ಹೊಳಲ್ಕೆರೆಯಲ್ಲಿ ಶನಿವಾರ ನಡೆದ ಬಿಸಿಯೂಟ ತಯಾರಕರ ತರಬೇತಿ ಕಾರ್ಯಾಗಾರವನ್ನು ಶಾಸಕ ಎಂ. ಚಂದ್ರಪ್ಪ ಉದ್ಘಾಟಿಸಿದರು.
ಹೊಳಲ್ಕೆರೆಯಲ್ಲಿ ಶನಿವಾರ ನಡೆದ ಬಿಸಿಯೂಟ ತಯಾರಕರ ತರಬೇತಿ ಕಾರ್ಯಾಗಾರವನ್ನು ಶಾಸಕ ಎಂ. ಚಂದ್ರಪ್ಪ ಉದ್ಘಾಟಿಸಿದರು.   

ಹೊಳಲ್ಕೆರೆ: ಮಧ್ಯಾಹ್ನದ ಬಿಸಿಯೂಟ ಯೋಜನೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಕೂಸು ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.

ಪಟ್ಟಣದ ಪ್ರಸನ್ನ ಗಣಪತಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಬಿಸಿಯೂಟ ತಯಾರಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ವಾಜಪೇಯಿ ಅವರು ಬಡತನದ ಕುಟುಂಬದಿಂದ ಬಂದವರು. ಅವರು ಚಿಕ್ಕವರಿದ್ದಾಗ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ಶಾಲೆಗೆ ಹೋಗುತ್ತಿದ್ದರು. ಅದನ್ನು ಕಂಡ ಒಬ್ಬ ಶಿಕ್ಷಕರು ಚಪ್ಪಲಿ ಖರೀದಿಸು ಎಂದು ₹5 ಕೊಟ್ಟಿದ್ದರಂತೆ. ಮುಂದಿನ ದಿನ ಮತ್ತೆ ಬರಿಗಾಲಿನಲ್ಲೇ ಬಂದ ಹುಡುಗನನ್ನು ಗಮನಿಸಿದ ಶಿಕ್ಷಕರು ‘₹5 ಕೊಟ್ಟಿದ್ದದೆನಲ್ಲ ಚಪ್ಪಲಿ ಏಕೆ ತೆಗೆದುಕೊಳ್ಳಲಿಲ್ಲ?’ ಎಂದು ಪ್ರಶ್ನಿಸಿದರಂತೆ. ಮೂರು ದಿನಗಳಿಂದ ನಾನು ಊಟ ಮಾಡಿರಲಿಲ್ಲ. ನೀವು ಕೊಟ್ಟ ಹಣದಲ್ಲಿ ಹೊಟ್ಟೆ ತುಂಬ ಊಟ ಮಾಡಿದೆ ಎಂದು ಹೇಳಿದರಂತೆ. ಇಂತಹ ಬಡತನ ಅನುಭವಿದ್ದ ವಾಜಪೇಯಿ ಪ್ರಧಾನಿ ಆದಾಗ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಿದರು’ ಎಂದು ಸ್ಮರಿಸಿದರು.

ADVERTISEMENT

‘ಗೌರವಧನ ಹೆಚ್ಚಳ ಸೇರಿದಂತೆ ನಿಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿದೆ’ ಎಂದರು.

ಪುರಸಭೆ ಉಪಾಧ್ಯಕ್ಷ ಕೆ.ಸಿ. ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಶ್ರೀನಿವಾಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಚ್. ವೆಂಕಟೇಶ್, ಅಗ್ನಿಶಾಮಕ ಇಲಾಖೆಯ ಅಧಿಕಾರಿ ಗೋಪಾಲ ನಾಯ್ಕ್, ಕುಮಾರ್, ಡಾ.ಆನಂದ್, ಮಹಂತೇಶ್, ಶಿವಕುಮಾರ್, ಸಿಆರ್‌ಪಿ ರಾಘವೇಂದ್ರ, ಎನ್.ಸಂತೋಷ್, ಬಸಣ್ಣ, ರಘು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.