ಮೊಳಕಾಲ್ಮುರು: ಕಳೆದ ವಾರ ಸುರಿದ ಮಳೆಗೆ ತಾಲ್ಲೂಕಿನ ತುಪ್ಪದಕ್ಕನಹಳ್ಳಿ ತಾಂಡಾ ಸಂಪರ್ಕಿಸುವ ಸೇತುವೆಯೊಂದು ಪೂರ್ಣವಾಗಿ ಕೊಚ್ಚಿ ಹೋಗಿದ್ದು, ಕೂಡಲೇ ದುರಸ್ತಿ ಮಾಡಿಸಬೇಕು ಎಂದು ತಾಂಡಾ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹಾನಗಲ್ ರಾಜ್ಯ ಹೆದ್ದಾರಿಯಿಂದ ತುಪ್ಪದಕ್ಕನಹಳ್ಳಿ ತಾಂಡಾ, ಐನಹಳ್ಳಿ, ಸಿದ್ದಯ್ಯನಕೋಟೆ ಸಂಪರ್ಕಿಸುವ ಈ ರಸ್ತೆಯಲ್ಲಿನ ತಾಂಡಾ ಸಮೀಪ ಸೇತುವೆ ಹಾನಿಗೀಡಾಗಿದೆ.
ಇದರಿಂದ ಎತ್ತನಬಂಡಿ, ಆಟೊ, ಸಾರಿಗೆ ವಾಹನಗಳ ಸಂಚಾರ ಸ್ಥಗಿತವಾಗಿದೆ. ಬೈಕ್ ಮಾತ್ರ ಓಡಿಸಬಹುದು ಎಂದು ಗ್ರಾಮಸ್ಥ ಗುಂಡ್ಯಾನಾಯ್ಕ ತಿಳಿಸಿದರು.
ಸೇತುವೆ ಹಾನಿಯಿಂದ ಶಿಕ್ಷಕರು, ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಲು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಅವಶ್ಯಕ ವಸ್ತುಗಳ ಖರೀದಿಗೆ ಪಟ್ಟಣಕ್ಕೆ ಹೋಗಲು ಆಗುತ್ತಿಲ್ಲ. ಇದರಿಂದ ಜೀವನ ನಿರ್ವಹಣೆಗೆ ತೀವ್ರ ತೊಂದರೆಯಾಗಿದೆ ಎಂದು ದೂರಿದರು.
‘ಮೊದಲೇ ಈ ಭಾಗ ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದಿದೆ. ಈ ಸೇತುವೆ ಹಾನಿಯಿಂದಾಗಿ ಈ ಭಾಗ ಹೊರ ಪ್ರಪಂಚದ ಸಂಪರ್ಕ ಕಳೆದುಕೊಂಡಿದೆ. 15 ದಿನಗಳಾದರೂ ಯಾವುದೇ ಅಧಿಕಾರಿ ಹಾಗೂ ಜನಪ್ರತಿನಿಧಿ ಇತ್ತ ಗಮನಹರಿಸಿ ಕ್ರಮಕ್ಕೆ ಮುಂದಾಗಿಲ್ಲ’ ಎಂದು ಜನಸಂಸ್ಥಾನ ಸಂಸ್ಥೆ ಕಾರ್ಯದರ್ಶಿ ವಿರೂಪಾಕ್ಷಪ್ಪ ದೂರಿದರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.