ADVERTISEMENT

‘ಮ್ಯಾಸನಾಯಕರ ಮೂಲ ಸಂಸ್ಕೃತಿ ರಕ್ಷಿಸಿ’

ಬುಡಕಟ್ಟುಗಳ ಕುರಿತ ಸಾಂಸ್ಕೃತಿಕ ಸಂವಾದ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:31 IST
Last Updated 28 ಜನವರಿ 2023, 6:31 IST
ಮೊಳಕಾಲ್ಮುರು ತಾಲ್ಲೂಕಿನ ಚಿಕ್ಕುಂತಿ ದೇವರಹಟ್ಟಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮ್ಯಾಸನಾಯಕ ಮತ್ತು ರಾಜ ಕಂಪಳಂನಾಯಕ ಬುಡಕಟ್ಟುಗಳ ಕುರಿತ ಸಾಂಸ್ಕೃತಿಕ ಸಂವಾದದಲ್ಲಿ ಪ್ರಾಧ್ಯಾಪಕ ವಿರೂಪಾಕ್ಷಪ್ಪ ಪೂಜಾರಹಳ್ಳಿ ಮಾತನಾಡಿದರು.
ಮೊಳಕಾಲ್ಮುರು ತಾಲ್ಲೂಕಿನ ಚಿಕ್ಕುಂತಿ ದೇವರಹಟ್ಟಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮ್ಯಾಸನಾಯಕ ಮತ್ತು ರಾಜ ಕಂಪಳಂನಾಯಕ ಬುಡಕಟ್ಟುಗಳ ಕುರಿತ ಸಾಂಸ್ಕೃತಿಕ ಸಂವಾದದಲ್ಲಿ ಪ್ರಾಧ್ಯಾಪಕ ವಿರೂಪಾಕ್ಷಪ್ಪ ಪೂಜಾರಹಳ್ಳಿ ಮಾತನಾಡಿದರು.   

ಮೊಳಕಾಲ್ಮುರು: ಅನಾದಿ ಕಾಲದಿಂದ ಮ್ಯಾಸನಾಯಕ ಜನಾಂಗದಲ್ಲಿ ಹಾಸುಹೊಕ್ಕಾಗಿರುವ ಆಚಾರ, ವಿಚಾರ, ಸಂಸ್ಕೃತಿಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಕಟ್ಟಿಕೊಡುವ ಅಗತ್ಯವಿದೆ ಎಂದು ನಿವೃತ್ತ ಪ್ರಾಂಶುಪಾಲರಾದ ಸಿ.ಬಿ. ಅನ್ನಪೂರ್ಣ ಜೋಗೇಶ್ ಹೇಳಿದರು.

ತಾಲ್ಲೂಕಿನ ಚಿಕ್ಕುಂತಿ ದೇವರಹಟ್ಟಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮ್ಯಾಸನಾಯಕ ಮತ್ತು ರಾಜ ಕಂಪಳಂ ನಾಯಕ ಬುಡಕಟ್ಟುಗಳ ಕುರಿತ ಸಾಂಸ್ಕೃತಿಕ ಸಂವಾದದಲ್ಲಿ ಅವರು ಮಾತನಾಡಿದರು.

‘ಹಿಂದೆ ಮ್ಯಾಸನಾಯಕರು ತಮ್ಮ ಹಾಗೂ ತಮ್ಮ ಜತೆಯಲ್ಲಿದ್ದ ಜಾನುಗಾರುಗಳ ರಕ್ಷಣೆಗಾಗಿ ಹಲವು ಭಾಗಗಳಲ್ಲಿ ಚದುರಿ ಹೋದರು. ಇದರಲ್ಲಿ ತಮಿಳುನಾಡಿನ ರಾಜಕಂಪಳಂ ನಾಯಕ ಜನಾಂಗ ಸಹ ಒಂದಾಗಿದೆ. ಅವರ ಜೀವನಶೈಲಿಯು ರಾಜ್ಯದ ಮ್ಯಾಸನಾಯಕ ಜನಾಂಗದ ರೀತಿ
ಯಲ್ಲಿದ್ದು, ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ರಾಜಕಂಪಳಂ ನಾಯಕ ಜನರ ಬಗ್ಗೆ ಬಿತ್ತರವಾಗಿದ್ದ ಮಾಹಿತಿಯನ್ನು ಕಂಡು ಸ್ಥಳ ಭೇಟಿ ಮಾಡಿ ಅಧ್ಯಯನ ಮಾಡಲಾಯಿತು’ ಎಂದು ಹೇಳಿದರು.

ADVERTISEMENT

ಇಲ್ಲಿನ ಮ್ಯಾಸನಾಯಕರ ರೀತಿಯಲ್ಲಿ ತಮಿಳುನಾಡಿನಲ್ಲಿ ದೇವರ ಎತ್ತುಗಳಿಗೆ ಪೂಜೆ ಸಲ್ಲಿಸುತ್ತಾರೆ. ಮಾತೃಭಾಷೆ, ದೇವರಪದಿ ಮುಂದೆ ಎತ್ತುಗಳನ್ನು ಮೇರೆಸುವ ಪದ್ಧತಿ, ಹಟ್ಟಿ, ದೇವಸ್ಥಾನಗಳಲ್ಲಿನ ಕಟ್ಟುಪಾಡು, ಪ್ರಾಣಿ, ಪ್ರಕೃತಿ ಪೂಜೆ ಮಾಡುವ ಪದ್ಧತಿಗಳು ತೀರಾ ಸಾಮ್ಯತೆ ಇದೆ ಎಂದು ಹೇಳಿದರು.

‘ನಮ್ಮ ಮ್ಯಾಸನಾಯಕ ಜನಾಂಗಕ್ಕೂ ತಮಿಳುನಾಡಿನ ರಾಜ ಕಂಪಳಂನಾಯಕ ಬುಡಕಟ್ಟು ಮಧ್ಯೆ ಹೆಚ್ಚು ಸಾಮ್ಯತೆ ಇದೆ. ಬೇರೆ, ಬೇರೆ ಹೆಸರುಗಳಲ್ಲಿ ದೇವರುಗಳುಗಳನ್ನು ಕರೆಯಲಾಗುತ್ತದೆ. ಆದರೆ, ಆಚಾರಗಳು ಒಂದೇ ರೀತಿಯಲ್ಲಿವೆ. ಮ್ಯಾಸಬೇಡರಲ್ಲಿ ಕಂಡುಬರುವ ಸಾಂಸ್ಕೃತಿಕ ವೈವಿದ್ಯಗಳು ದೇಶದ ಬೇರೆ ಯಾವ ಜಾತಿಯಲ್ಲೂ ಕಾಣಸಿಗುವುದಿಲ್ಲ’ ಎಂದು ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿರೂಪಾಕ್ಷಪ್ಪ ಪೂಜಾರಹಳ್ಳಿ ಹೇಳಿದರು.

ಜಿ.ಪಾಲಯ್ಯ, ಪ್ರಹ್ಲಾದ್, ಉಮೇಶ್, ಸಿದ್ದೇಶ್ ಕಾತ್ರಿಕೇನಹಟ್ಟಿ ಮಾತನಾಡಿದರು. ಸಮಿತಿ ಅಧ್ಯಕ್ಷರಾದ ಗೆರೆಗಲ್ ಪಾಪಯ್ಯ, ಉಪಾಧ್ಯಕ್ಷ ಸಿ.ಎಸ್. ಜೋಗೇಶ್, ಕಾರ್ಯದರ್ಶಿ ದೊಡ್ಡಮನಿ ಪ್ರಸಾದ್, ಎಂ.ಕೆ. ಬೋಸಪ್ಪ, ಮಲ್ಲೇಶ್, ವಿ. ನಾಗವೇಣಿ, ಎಂ.ಪಿ. ಓಬಣ್ಣ, ಪಾಲಣ್ಣ, ಗೋವಿಂದಪ್ಪ, ಲೋಕೇಶ್, ಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.