ಚಿತ್ರದುರ್ಗ: ‘ಕೇಂದ್ರ ಸರ್ಕಾರ ತನ್ನ 11 ವರ್ಷದ ಸಾಧನೆ ಪಟ್ಟಿ ಕೊಡಲಿ, ನಾವು ನಮ್ಮ ಸರ್ಕಾರದ ಸಾಧನೆಯ ಪಟ್ಟಿ ಬಿಡುಗಡೆ ಮಾಡುತ್ತೇವೆ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸವಾಲ್ ಹಾಕಿದರು.
‘ಗ್ಯಾರಂಟಿ ಯೋಜನೆಯಿಂದ ಜನ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಆದರೆ ಕೇಂದ್ರದ ಯಾವ ಯೋಜನೆಯಿಂದಲೂ ಸಾಮಾನ್ಯ ಜನರು ಬದುಕುತ್ತಿಲ್ಲ. ಕಪ್ಪು ಹಣ ತರುತ್ತೇವೆಂದರು. ಆದರೆ, ಎಲ್ಲಿದೆ ಕಪ್ಪು ಹಣ?, ₹ 15 ಲಕ್ಷ ಯಾರ ಖಾತೆಗೆ ಹಾಕಿದ್ದಾರೆ?, ಶೋಭಾ ಕರಂದ್ಲಾಜೆ ಖಾತೆಗೆ ₹ 15 ಲಕ್ಷ ಬಂದಿದೆಯಾ?’ ಎಂದು ಪ್ರಶ್ನಿಸಿದರು.
‘ಮೊದಲು ನಿಮ್ಮ ತಟ್ಟೆಯನ್ನು ನೋಡಿಕೊಳ್ಳಿ, ಬೇರೆಯವರ ತಟ್ಟೆಯ ನೋಣ ನೋಡಬೇಡಿ. ಮಾನಸಿಕ ಸ್ಥಿಮಿತ ಕಳೆದುಕೊಂಡದ್ದು ಬಿಜೆಪಿಗರು; ನಾವಲ್ಲ. ಬಿಜೆಪಿ ಮನೆ ಒಂದು ಹದಿನಾರು ಬಾಗಿಲು ಆಗಿದೆ’ ಎಂದು ವ್ಯಂಗ್ಯವಾಡಿದರು.
‘ಪಕ್ಷದ ಆಂತರಿಕ ವಿಚಾರ ಬಗ್ಗೆ ಸುರ್ಜೆವಾಲಾ ಚರ್ಚಿಸಿದ್ದಾರೆ. ಅವರು ಸರ್ಕಾರದ ವಿಚಾರ ಚರ್ಚಿಸಲು ಬಂದಿಲ್ಲ. ಜುಲೈ 30ಕ್ಕೆ ಶಾಸಕರ ಸಭೆಯಿದೆ, ತಲಾ ₹ 50 ಕೋಟಿ ಅನುದಾನ ಕೊಡುತ್ತಿದ್ದಾರೆ. ನಾವೆಲ್ಲ ಒಂದಾಗಿದ್ದೇವೆ. ಅಸಮಾಧಾನ ಶಮನಕ್ಕಾಗಿ ಎಂಬುದೇನಿಲ್ಲ’ ಎಂದರು.
‘ಬಿಜೆಪಿ ದಲಿತರಿಗೆ ಪ್ರಧಾನಮಂತ್ರಿ ಮಾಡಲಿ. ಯಾವ ದಲಿತರಿಗೆ ಬಿಜೆಪಿ ಮುಖ್ಯ ಹುದ್ದೆ ನೀಡಿದೆ. ನಾವು ಹಿಂದೆ ಬೇರೆ ಬೇರೆ ಸಮುದಾಯದವರನ್ನು ರಾಷ್ಟ್ರಪತಿ ಮಾಡಿದ್ದೇವೆ. ದಲಿತ ಸಮುದಾಯದ ಖರ್ಗೆ ಎಐಸಿಸಿ ಅಧ್ಯಕ್ಷರಿದ್ದಾರೆ. ಬಿಜೆಪಿ ಬಂಗಾರು ಲಕ್ಷ್ಮಣ್ ಅಧ್ಯಕ್ಷರನ್ನಾಗಿಸಿ ಏನು ಮಾಡಿದರು?. ಕಾಲ ಬಂದಾಗ ದಲಿತ ಸಿಎಂ, ದಲಿತ ಪಿಎಂ ಆಗುತ್ತಾರೆ. ಇದು ಕಾಂಗ್ರೆಸ್ ಪಕ್ಷದಿಂದ ಆಗುತ್ತಾರೆ, ಬೇರೆ ಪಕ್ಷದಿಂದ ಆಗಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.