ದೇವರಮರಿಕುಂಟೆ (ಚಳ್ಳಕೆರೆ): ತಾಲ್ಲೂಕಿನ ದೇವರ ಮರಿಕುಂಟೆ ಗ್ರಾಮದಲ್ಲಿ ಚಳ್ಳಕೆರಮ್ಮ ದೇವಿ ನೂತನ ದೇವಸ್ಥಾನ ಉದ್ಘಾಟನೆ, ಕಳಶ ಸ್ಥಾಪನೆ ಹಾಗೂ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಗ್ರಾಮದ ಜನರು, ನಂದಿಕೋಲು ಕುಣಿತ, ಡೋಲು, ಡೊಳ್ಳು, ತಮಟೆ, ಕೋಲಾಟ, ಭಜನೆ ಹಾಗೂ ಉರುಮೆ ವಾದ್ಯಗಳೊಂದಿಗೆ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು.
ನೂರಾರು ಮಹಿಳೆಯುರು ಪೂರ್ಣ ಕುಂಭವನ್ನು ಹೊತ್ತು ದೇವಿಯ ಗುಡಿ ಮುಂದೆ ಸಾಲಾಗಿ ನಿಂತಿದ್ದರು. ಗ್ರಾಮ ದೇವತೆ ಚಳ್ಳಕೆರಮ್ಮನಿಗೆ ಮಾಂಗಲ್ಯಧಾರಣೆ, 108 ಎಲೆ, ಅಡಿಕೆ, ನಿಂಬೆಹಣ್ಣು, ತೆಂಗಿನಕಾಯಿ ಮತ್ತು ಹಿಟ್ಟಿನಾರತಿ, ಬೇವಿನ ಸೀರೆಯ ಹರಕೆ ಮತ್ತು ಚಳ್ಳಕೆರಮ್ಮನಿಗೆ ಕುಂಕುಮಾರ್ಚನೆ, ಉಡಿಗೆ ತುಂಬುವುದು, ಸೀರೆ ಉಡಿಸುವುದು, ಎಲೆಪೂಜೆ, ಮತ್ತು ಹಸಿರು ಗಾಜಿನ ಬಳೆ, ಉಡಿಯಕ್ಕಿಯನ್ನು ಭಕ್ತರು ಅರ್ಪಿಸಿದರು.
ಶಾಸಕ ಟಿ.ರಘುಮೂರ್ತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ಬಾಬು, ಸದಸ್ಯ ಬಿ.ಪಿ. ಪ್ರಕಾಶಮೂರ್ತಿ, ತಾಲ್ಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸಮರ್ಥರಾಯ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಣ್ಣ, ಚಳ್ಳಕೆರಮ್ಮ ದೇವಿ ಸೇವಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಒ. ಮಹೇಶ್ವರಪ್ಪ, ಕಾರ್ಯದರ್ಶಿ ಎಂ.ಸಿ. ತಿಪ್ಪೇಸ್ವಾಮಿ, ಸಾಹಿತಿ ತಿಪ್ಪಣ್ಣ ಮರಿಕುಂಟೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.