ಚಳ್ಳಕೆರೆ: ನಿರಂತರ ಮಳೆಗೆ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಯ 300 ಕೊಠಡಿಗಳು ಶಿಥಿಲಗೊಂಡಿವೆ. 196 ಮನೆಗಳು ಕುಸಿದು ಬಿದ್ದಿವೆ.
‘ಶಾಲಾ ಕೊಠಡಿಗಳು ದುಸ್ಥಿತಿಯಲ್ಲಿರುವ ಕಾರಣ ಮಕ್ಕಳು ಎಚ್ಚರಿಕೆ ವಹಿಸಬೇಕು. ಮಕ್ಕಳ ಹಿತರಕ್ಷಣೆ ದೃಷ್ಟಿಯಿಂದ ಎಲ್ಲಾ ಕೊಠಡಿಗಳನ್ನು ತಪ್ಪದೇ ಪರಿಶೀಲನೆ ನಡೆಸುವ ಮೂಲಕ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಶಿಕ್ಷಕರಿಗೆ ಸಲಹೆ ನೀಡಲಾಗಿದೆ.ಶಾಲಾ ಕೊಠಡಿಗಳ ದುರಸ್ತಿಗೆ ಹೆಚ್ಚಿನ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ತಿಳಿಸಿದರು.
‘ತಾಲ್ಲೂಕಿನಲ್ಲಿ ಶೇ 75ರಷ್ಟು ಮನೆಗಳು ಮಳೆಗೆ ಸೋರುತ್ತಿವೆ. ಶುಕ್ರವಾರ-ಶನಿವಾರ ಎರಡು ದಿನದಲ್ಲಿ 196 ಮನೆಗಳು ಹಾನಿಯಾಗಿದ್ದು, ₹ 80 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ನಿರಾಶ್ರಿತರಿಗೆ ಆಹಾರ ಧಾನ್ಯ, ಹಾಸಿಗೆ ಹಾಗೂ ಹೊದಿಕೆ ಕಲ್ಪಿಸುವ ಸಲುವಾಗಿ ಅಗತ್ಯವಿರುವ 80 ಗ್ರಾಮದಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.
ಬೆಳೆವಿಮೆ ಪಾವತಿಗೆ ಅವಕಾಶ: ಫಸಲ್ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆಗಳಿಗೆ ಇದುವರೆಗೆ ವಿಮೆ ಪಾವತಿಸದೇ ಇರುವವರು ಈ ತಿಂಗಳ ಅಂತ್ಯದ ಒಳಗೆ ಬೆಳೆವಿಮೆಯನ್ನು ತಪ್ಪದೇ ಪಾವತಿಸಬೇಕು. ವಿಮೆ ಪಾವತಿಸಿರುವವರು, ಅಕಾಲಿಕ ಮಳೆಗೆ ಹಾನಿಯಾದ ಬೆಳೆಗೆ ಪರಿಹಾರ ಪಡೆಯಲು ಬೆಳೆನಷ್ಟದ ಫೋಟೊ ಹಾಗೂ ಇನ್ನಿತರ ಅಗತ್ಯ ದಾಖಲೆಯನ್ನು ಇಲಾಖೆಗೆ ನೀಡಬೇಕು ಎಂದು ಕೃಷಿ ಸಹಾಯಕ ನಿರ್ದೇಶಕ ಅಶೋಕ್ ಮನವಿ ಮಾಡಿದ್ದಾರೆ.
‘ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಪ್ರತಿದಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗೆ ಭೇಟಿ ನೀಡಿ ಮಳೆಹಾನಿ ವರದಿ ಸಲ್ಲಿಸಲು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಡಗಿನ ಬಸಪ್ಪ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.