ಚಳ್ಳಕೆರೆ: ‘ನಾಗರಿಕರ ಓಡಾಟಕ್ಕೆ ತೊಂದರೆಯಾಗದಂತೆ ಎಚ್ಚರವಹಿಸಬೇಕು’ ಎಂದು ನಗರಸಭೆ ಅಧ್ಯಕ್ಷೆ ಶಿಲ್ಪಾ ಬೀದಿಬದಿ ವ್ಯಾಪಾರಸ್ಥರಿಗೆ ಸಲಹೆ ನೀಡಿದರು.
ನಗರಸಭೆ ಕಚೇರಿಯಲ್ಲಿ ಬೀದಿಬದಿ ವ್ಯಾಪಾರಸ್ಥರ ಸಮಿತಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
‘ನಗರದ ಸೂಕ್ತವಾದ ಜಾಗದಲ್ಲಿ ಹೂವು, ಹಣ್ಣು, ಸೊಪ್ಪು, ತರಕಾರಿ ಮಾರಾಟದ ಜತೆಗೆ ನಗರಸಭೆ ಯೋಜನೆಯಿಂದ ದೊರೆಯುವ ಸಾಲ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು’ ಎಂದು ಹೇಳಿದರು.
ಯೋಜನಾಧಿಕಾರಿ ಭೂತಯ್ಯ ಮಾತನಾಡಿ, ‘ಸ್ವ–ಉದ್ಯೋಗ ಮತ್ತು ಸ್ವಾವಲಂಬನೆ ಜೀವನ ನಡೆಸಲು ಪಿ.ಎಂ. ಸ್ವನಿಧಿ, ಜೀವನ್ ಜ್ಯೋತಿ ಬಿಮಾ ಮತ್ತು ದೀನ ದಯಾಳ್ ಮುಂತಾದ ಯೋಜನೆಗೆ ಅರ್ಜಿ ಸಲ್ಲಿಸಬೇಕು’ ಎಂದು ವ್ಯಾಪಾರಸ್ಥರಿಗೆ ತಿಳಿಸಿದರು.
‘ಪ್ಲಾಸ್ಟಿಕ್ ತುಂಬಾ ಹಾನಿಕಾರಕ, ಹೀಗಾಗಿ ನಗರಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ತಿಂಡಿ ಅಂಗಡಿಯಲ್ಲಿ ಆಹಾರ ಪದಾರ್ಥಗಳಿಗೆ ಬಾಳೆಎಲೆ, ಅಸ್ತ್ರದ ಎಲೆ ತಪ್ಪದೆ ಬಳಕೆ ಮಾಡಬೇಕು. ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಬೀದಿಬದಿ ವ್ಯಾಪಾರಿಗಳಿಗೆ ಪರಿಸರ ಎಂಜಿನಿಯಂರ್ ನರೇಂದ್ರಬಾಬು ಎಚ್ಚರಿಕೆ ನೀಡಿದರು.
‘ಸಾಲ ಸಬ್ಸಿಡಿ ಸೌಲಭ್ಯ ದುರುಪಯೋಗವಾಗುತ್ತಿದೆ. ಹಾಗಾಗಿ ಪರಿಶೀಲಿಸಿ ಅರ್ಹರಿಗೆ ಸಾಲ ಸೌಲಭ್ಯ ಕಲ್ಪಿಸಬೇಕು’ ಎಂದು ಬ್ಯಾಂಕ್ ಅಧಿಕಾರಿಗಳಲ್ಲಿ ಎಐಟಿಯುಸಿ ಜಿಲ್ಲಾ ಮುಖಂಡ ಸಿ.ವೈ.ಶಿವರುದ್ರಪ್ಪ ಮನವಿ ಮಾಡಿದರು.
ನಗರಸಭೆ ಉಪಾಧ್ಯಕ್ಷೆ ಕವಿತಾ ಬೋರಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಮಾತನಾಡಿದರು.
ಪೌರಾಯುಕ್ತ ಜಗರೆಡ್ಡಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸಾಗರ್, ಬೀದಿಬದಿ ವ್ಯಾಪಾರಿಗಳಾದ ವೆಂಕಟೇಶ್, ತಿಪ್ಪೇಸ್ವಾಮಿ, ರಾಜಣ್ಣ, ನಾಗರಾಜ, ಇಂದ್ರಮ್ಮ, ಭವ್ಯಾ, ರೂಪಾ, ಹನುಮಂತಪ್ಪ, ಖಾಸಿಂ, ಓಬಯ್ಯ, ತಿಮ್ಮರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.