ADVERTISEMENT

ಚಳ್ಳಕೆರೆ | ಗೃಹಲಕ್ಷ್ಮೀ ಅರ್ಜಿ ಪರಿಶೀಲನೆ: ಮಹಿಳೆಯರ ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 16:32 IST
Last Updated 9 ನವೆಂಬರ್ 2023, 16:32 IST
ಚಳ್ಳಕೆರೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಅರ್ಜಿಗಳ ಪರಿಶೀಲನೆ ವೇಳೆ ಗುರುವಾರ ನೂಕುನುಗ್ಗಲು ಉಂಟಾಯಿತು
ಚಳ್ಳಕೆರೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಅರ್ಜಿಗಳ ಪರಿಶೀಲನೆ ವೇಳೆ ಗುರುವಾರ ನೂಕುನುಗ್ಗಲು ಉಂಟಾಯಿತು   

ಚಳ್ಳಕೆರೆ: ಯೋಜನೆ ಅನುಷ್ಠಾನಗೊಳಿಸಿ ಮೂರು ತಿಂಗಳಾದರೂ ಖಾತೆಗೆ ಗೃಹಲಕ್ಷ್ಮೀ ಹಣ ಜಮೆಯಾಗದ ಹಿನ್ನೆಲೆಯಲ್ಲಿ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಕಚೇರಿಯಲ್ಲಿ ಗುರುವಾರ ನೂರಾರು ಮಹಿಳೆಯರು ಸೇರಿದ್ದರಿಂದ ನೂಕುನುಗ್ಗಲು ಉಂಟಾಯಿತು. 

ಇಲಾಖೆಯ ಯೋಜನಾಧಿಕಾರಿಗಳು ಮಹಿಳೆಯರ ಖಾತೆಗಳನ್ನು ಪರಿಶೀಲನೆ ನಡೆಸಿದರು. ತಾಲ್ಲೂಕಿನ ಆಯಾ ಹೋಬಳಿಯಲ್ಲಿ ಅರ್ಜಿ ಹಾಗೂ ಬ್ಯಾಂಕ್ ಖಾತೆ ಪರಿಶೀಲನೆಗೆ ಅವಕಾಶವಿದ್ದರೂ ನಗರದ ಕಚೇರಿಗೆ ವಿವಿಧ ಗ್ರಾಮಗಳ ಮಹಿಳೆಯರು ಬಂದಿದ್ದರು.

ಸೌಲಭ್ಯ ವಂಚಿತ ಮಹಿಳೆಯರು ಆಧಿಕಾರಿಗಳ ಎದುರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ‘ನನಗೆ ಎರಡು ಕಂತು ಮಾತ್ರ ಬಂದಿದೆ‘ ಎಂದು ಮಹಿಳೆಯೊಬ್ಬರು ತಿಳಿಸಿದರು. ‘ನನ್ನ ಖಾತೆಗೆ ಈವರೆಗೆ ಹಣವೇ ಬಂದಿಲ್ಲ ಪರಿಶೀಲಿಸಿ’ ಎಂದು ವಿವಿಧ ಮತ್ತೊಬ್ಬ ಮಹಿಳೆ ದೂರಿದರು. 

ADVERTISEMENT

‘ಗೃಹಲಕ್ಷ್ಮೀ ಸಲುವಾಗಿ ಕೂಲಿ ಕೆಲಸ ಬಿಟ್ಟು ಬ್ಯಾಂಕ್, ಅಂಚೆ ಕಚೇರಿ, ಆಹಾರ ಇಲಾಖೆ ಹಾಗೂ ಗ್ರಾಮ ಒನ್ ಕೇಂದ್ರಗಳಿಗೆ ಅಲೆದಾಡಿ ಸಾಕಾಗಿದೆ’ ಎಂದು ಹೊಟ್ಟೆಪ್ಪನಹಳ್ಳಿ ಗ್ರಾಮದ ರತ್ನಮ್ಮ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅರ್ಜಿ ಸ್ವೀಕೃತಗೊಂಡಿದ್ದರೂ ಖಾತೆಗೆ ಹಣ ಜಮೆ ಆಗಿಲ್ಲ. ಮತ್ತೆ ಹೊಸ ಖಾತೆ, ಇ–ಕೆವೈಸಿ ಮಾಡಿಸಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಗಾಂಧಿನಗರದ ನಿವಾಸಿ ನಜೀರಾಬಾನು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಒಟ್ಟು 78,719 ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪೈಕಿ ಮೂರು ಸಾವಿರ ಜನರಿಗೆ ತಾಂತ್ರಿಕ ಸಮಸ್ಯೆಯಿಂದ ತೊಂದರೆಯಾಗಿದೆ ಎಂದು ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಸಿ.ಹರಿಪ್ರಸಾದ್ ಹೇಳಿದರು.

‘ಅರ್ಹ ಫಲನುಭವಿಗಳ ಸಮಸ್ಯೆ ಪರಿಹರಿಸಲು ಮತ್ತು ಹೊಸ ಖಾತೆ ತೆರೆಯಲು ಪರಶುರಾಂಪುರ, ತಳಕು, ನಾಯಕನಹಟ್ಟಿ ಕಸಬಾ ಹೋಬಳಿ ಅಂಚೆ ಕಚೇರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರು ಆತಂಕಪಡುವ ಅಗತ್ಯವಿಲ್ಲ. ಶಾಸಕರ ಸಲಹೆ ಹಾಗೂ ಮಾರ್ಗದರ್ಶನದಂತೆ ಎಲ್ಲಾ ಫಲಾನುಭವಿಗಳಿಗೆ ಗೃಹ ಲಕ್ಷ್ಮೀ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಆಧಾರ್ ಜೋಡಣೆ, ಇ–ಕೆವೈಸಿ, ಹೊಸ ಖಾತೆ ತೆರೆಯಲು ಮೂರು ದಿನ ಅವಕಾಶವಿದೆ’ ಎಂದು ಕಲ್ಯಾಣ ಇಲಾಖೆ ಸಿ.ಹರಿಪ್ರಸಾದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.