ಚಳ್ಳಕೆರೆ: ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸಿ ಅವರಿಗೆ ಜಾಬ್ಕಾರ್ಡ್ ವಿತರಿಸಬೇಕು ಎಂದು ಹಿರಿಯ ನ್ಯಾಯಾಧೀಶ ಎಂ.ವಿಜಯ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿತ್ರದುರ್ಗ ಕಾರ್ಮಿಕ ಇಲಾಖೆ, ತಾಲ್ಲೂಕು ವಕೀಲರ ಸಂಘ ಮತ್ತು ಕಾನೂನು ಸೇವಾ ಇಲಾಖೆ ಸಹಯೋಗದಲ್ಲಿ ಗುರುವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರ ಸೌಲಭ್ಯ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಅಂಕಿ– ಸಂಖ್ಯೆಗಳ ಪ್ರಕಾರ ಕೆಲವೇ ಕೆಲ ಕಾರ್ಮಿಕರು ಜಾಬ್ಕಾರ್ಡ್ ಪಡೆದಿದ್ದರೂ ಅವರಿಗೂ ಪೂರ್ಣ ಪ್ರಮಾಣದಲ್ಲಿ ಕೂಲಿ ದೊರೆಯುತ್ತಿಲ್ಲ. ಆರೋಗ್ಯ, ಕಾರ್ಮಿಕರ ಮಕ್ಕಳ ಶಿಕ್ಷಣದ ಪ್ರೋತ್ಸಾಹಕ್ಕಾಗಿ ಕಲಿಕಾ ಸಾಮಗ್ರಿ ವಿತರಣೆ, ಸರ್ಕಾರಿ ಯೋಜನೆ ಸಾಲ ಮುಂತಾದ ಸೌಲಭ್ಯ ಒದಗಿಸಲು ಅಧಿಕಾರಿಗಳು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಸಿವಿಲ್ ನ್ಯಾಯಾಧೀಶ ಸಮಿರ್ ಪಿ.ನಂದ್ಯಾಲ ಮಾತನಾಡಿ, ‘ಮಹಿಳಾ ಕೂಲಿ ಕಾರ್ಮಿಕರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯ, ಹಲ್ಲೆ, ಅತ್ಯಾಚಾರ ಮುಂತಾದ ಪ್ರಕರಣಗಳನ್ನು ಹತ್ತಿಕ್ಕಲು ಎಲ್ಲ ಕಾರ್ಮಿಕರಲ್ಲಿ ಕಾನೂನಿನ ಅರಿವು ಮೂಡಿಸಬೇಕು’ ಎಂದು ವಕೀಲರಿಗೆ ಸಲಹೆ ನೀಡಿದರು.
ನ್ಯಾಯಾಧೀಶೆ ಎಚ್.ಆರ್.ಹೇಮಾ, ನ್ಯಾಯಾಧೀಶ ಬಿ.ಆರ್.ಪುನಿತ್, ಚಿತ್ರದುರ್ಗ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಅನಿಲ್ ಬಾಲಚಂದ್ರ ಬಗಟೆ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಶಶಿಧರ್ ಮಾತನಾಡಿದರು.
ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ.ನಾಗರಾಜ, ಉಪಾಧ್ಯಕ್ಷ ಪಾಲಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಸಿದ್ದರಾಜ್, ಖಜಾಂಚಿ ರುದ್ರಯ್ಯ, ಕಾರ್ಮಿಕ ಇಲಾಖೆ ನಿರೀಕ್ಷಕಿ ಕುಸುಮಾ, ಆರೋಗ್ಯ ಇಲಾಖೆ ತಾಲ್ಲೂಕು ಆಡಳಿತಾಧಿಕಾರಿ ಡಾ.ಕಾಶಿ, ಶಿಶು ಅಭಿವೃದ್ಧಿ ಯೋಜನಾ ಕಚೇರಿ ಸಹಾಯಕ ನಿರ್ದೇಶಕ ಹರಿಪ್ರಸಾದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.