ADVERTISEMENT

ಚಳ್ಳಕೆರೆ ತಾಲ್ಲೂಕು ಆಸ್ಪತ್ರೆ: ಚಿಕಿತ್ಸೆ ನೀಡಲು ಇಲ್ಲಿ ತಜ್ಞ ವೈದ್ಯರೇ ಇಲ್ಲ!

ಚಳ್ಳಕೆರೆ ತಾಲ್ಲೂಕು ಆಸ್ಪತ್ರೆ ದುಃಸ್ಥಿತಿ; ನೇಮಕಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 5:41 IST
Last Updated 3 ಫೆಬ್ರುವರಿ 2026, 5:41 IST
ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆಗಾಗಿ ಕಾಯುತ್ತಿರುವ ಸಾರ್ವಜನಿಕರು
ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆಗಾಗಿ ಕಾಯುತ್ತಿರುವ ಸಾರ್ವಜನಿಕರು   

ಚಳ್ಳಕೆರೆ: ಗ್ರಾಮೀಣ ಭಾಗದ ಬಡಜನತೆಗೆ ಆರೋಗ್ಯ ತುರ್ತು ಸಂದರ್ಭ ಚಿಕಿತ್ಸೆಗಾಗಿ ಇರುವ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಕೆಲ ವಿಭಾಗಗಳಲ್ಲಿ ತಜ್ಞ ವೈದ್ಯರೇ ಇಲ್ಲ.

ಮೂರು ವರ್ಷಗಳಿಂದ ತಾಲ್ಲೂಕು ಆಸ್ಪತ್ರೆಯಲ್ಲಿ ನೇತ್ರ ತಜ್ಞರು, ಅರಿವಳಿಕೆ ತಜ್ಞರು, ತುರ್ತು ಚಿಕಿತ್ಸಾ ವೈದ್ಯರು ಹಾಗೂ ಸಾಮಾನ್ಯ ಶಸ್ತ್ರಚಿಕಿತ್ಸಕ (ಜನರಲ್ ಸರ್ಜನ್), ಚರ್ಮದ ವೈದ್ಯರು ಇಲ್ಲದ ಕಾರಣ ಆಸ್ಪತ್ರೆಗೆ ಬರುವ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

ಇಲ್ಲಿಗೆ ಚಿಕಿತ್ಸೆ ಅರಸಿ ಬರುವ ನೂರಾರು ರೋಗಿಗಳನ್ನು ಸಿಬ್ಬಂದಿಯೂ ತಕ್ಷಣಕ್ಕೇ ಜಿಲ್ಲಾ ಆಸ್ಪತ್ರೆಗೆ ಕಳಿಸುವಂಥ ಸ್ಥಿತಿ ಎದುರಾಗಿದೆ.

ADVERTISEMENT

ನಿತ್ಯ ಈ ಆಸ್ಪತ್ರೆಗೆ ಅಂದಾಜು 700ರಿಂದ 1,000 ರೋಗಿಗಳು ಚಿಕಿತ್ಸೆಗೆಂದು ಬರುತ್ತಾರೆ. ಅವರಲ್ಲಿ ಅಂದಾಜು 150 ಜನ ಸಾಮಾನ್ಯ ಶಸ್ತ್ರಚಿಕಿತ್ಸೆಗೆಂದು ಬರುತ್ತಿದ್ದು, ಜನರಲ್ ಸರ್ಜನ್ ಇಲ್ಲದ ಕಾರಣ ಸಣ್ಣ ಪುಟ್ಟ ಶಸ್ತ್ರ ಚಿಕಿತ್ಸೆಗೆ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಡಲಾಗುತ್ತಿದೆ.

ಆಪರೇಷನ್‌ಗೆ ಬರುವ ರೋಗಿಗಳಿಗೆ ಅರಿವಳಿಕೆ ಚುಚ್ಚುಮದ್ದು ನೀಡಬೇಕಾದರೆ ಬೇರೆ ಕಡೆಯಿಂದ ವೈದ್ಯರನ್ನು ಕರೆಯಿಸಬೇಕಿದೆ. ಆ ವೈದ್ಯರು ಬಾರದೆ ಹೋದರೆ ಇಡೀ ದಿನ ಕಾಯಬೇಕು. ಇಲ್ಲದಿದ್ದರೆ ರೋಗಿಗಳು ವಿಧಿಯಿಲ್ಲದೇ ಜಿಲ್ಲಾ ಆಸ್ಪತ್ರೆಯತ್ತ ಅಥವಾ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕು.

ಕೆಲವು ವಿಭಾಗಗಳ ವೈದ್ಯರು ಇಲ್ಲದಿರುವುದನ್ನೇ ನೆಪ ಮಾಡಿಕೊಂಡಿರುವ ಇಲ್ಲಿನ ಸಿಬ್ಬಂದಿ ಹಾಗೂ ವೈದ್ಯರು ರೋಗಿಗಳ ಸಮಸ್ಯೆ ಏನು ಎಂದು ಕೇಳುವ ಮೊದಲೇ, ‘ಇಲ್ಲಿ ಚಿಕಿತ್ಸೆ ಸಿಗುವುದಿಲ್ಲ. ಜಿಲ್ಲಾ ಆಸ್ಪತ್ರೆಗೆ ಹೋಗಿ’ ಎಂದು ಚೀಟಿ ಬರೆದುಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಜಿಲ್ಲಾ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಅಲ್ಲಿಯೂ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.

‘ಸದ್ಯ ಆಸ್ಪತ್ರೆಯಲ್ಲಿ 7 ಜನ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಕೆಲವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿದ್ದರಿಂದ ನಮಗೂ ಒತ್ತಡ ಹೆಚ್ಚಾಗುತ್ತಿದೆ. ಬರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡಲು ಆಗದೆ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹಲವಾರು ಬಾರಿ ವೈದ್ಯರ ನೇಮಕ ಮಾಡುವಂತೆ ಶಾಸಕರಿಗೂ, ಸಚಿವರಿಗೂ ಹೇಳಿದ್ದೇವೆ. ಆದರೆ, ಯಾರೂ ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವೈದ್ಯರೊಬ್ಬರು ‘ಪ್ರಜಾವಾಣಿ’ ಎದುರು ಅಸಮಾಧಾನ ಹೊರಹಾಕಿದರು.

‘ಈ ಆಸ್ಪತ್ರೆಗೆ ಹೆಚ್ಚು ರೋಗಿಗಳು ಬರುವುದರಿಂದ ಒತ್ತಡ ಇದೆ ಎಂಬ ಕಾರಣಕ್ಕೆ ತಜ್ಞ ವೈದ್ಯರು ಇಲ್ಲಿ ನೇಮಕಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕಡಿಮೆ ವೇತನ ಹಾಗೂ ತಮ್ಮ ಖಾಸಗಿ ಕ್ಲಿನಿಕ್‌ಗಳಲ್ಲಿ ಕೆಲಸ ಮಾಡಲು ಸಮಯ ಸಿಗದು ಎಂದೂ ವೈದ್ಯರು ನೇಕರು ಬರುತ್ತಿಲ್ಲ’ ಎಂದೂ ಅವರು ಆರೋಪಿಸಿದರು.

‘ಜನಪ್ರತಿನಿಧಿಗಳು ಆಸ್ಪತ್ರೆಗೆ ಭೇಟಿ ನೀಡಿದಾಗ ರೋಗಿಗಳು ಸಮರ್ಪಕ ಚಿಕಿತ್ಸೆ ದೊರೆಯದ ಬಗ್ಗೆ, ವೈದ್ಯರ ಅಲಭ್ಯತೆ ಬಗ್ ದೂರು ನೀಡಿದರೆ ನಂತರ ಅವರ ಮೇಲೆ ಹರಿಹಾಯುವವರೂ ಇದ್ದಾರೆ. ವೈದ್ಯರ ಕೊರತೆಯಿಂದಾಗಿ ರೋಗಿಗಳು ದೂರುತ್ತಾರೆ. ಅದು ಯಾರಿಗೂ ಅರ್ಥವಾಗುತ್ತಿಲ್ಲ’ ಎಂದು ಅವರು ಹೇಳಿದರು.

‘ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರು ವರ್ಗಾವಣೆಯಾಗಿ ವರ್ಷಗಳೇ ಕಳೆದರೂ ಬೇರೆ ವೈದ್ಯರನ್ನು ನೇಮಕ ಮಾಡಿಸುವ ಕೆಲಸಕ್ಕೆ ಜನಪ್ರತಿನಿಧಿಗಳಾಗಲೀ, ಹಿರಿಯ ಅಧಿಕಾರಿಗಳಾಗಲೀ ಮುಂದಾಗಿಲ್ಲ. ಶಾಸಕರು, ಸಚಿವರು ಎಚ್ಚೆತ್ತುಕೊಂಡು ತಾಲ್ಲೂಕಿನ ಬಡಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಖಾಲಿ ಹುದ್ದೆಗಳ ನೇಮಕಕ್ಕೆ ಕ್ರಮ ಕೈಘೊಳ್ಳಬೇಕು ಎಂದು’ ಅವರು ಕೋರಿದರು.

‘ಚರ್ಮ ರೋಗ ಸಂಬಂಧ ಎರಡ್ಮೂರು ದಿನಗಳಿಂದ ತಾಲ್ಲೂಕು ಆಸ್ಪತ್ರೆಗೆ ಬರುತ್ತಿದ್ದೇನೆ. ಇಲ್ಲಿರುವ ಸಿಬ್ಬಂದಿಯು ಮಾತ್ರೆ, ಇಂಜೆಕ್ಷನ್ ಕೊಟ್ಟು ಕಳಿಸುತ್ತಿದ್ದಾರೆ. ಒಂಚೂರು ರೋಗ ವಾಸಿ ಆಗಿಲ್ಲ. ಕೇಳಿದರೆ ಇಲ್ಲಿ ಚರ್ಮರೋಗ ತಜ್ಞರಿಲ್ಲ. ಅಗತ್ಯವಿದ್ದರೆ ಖಾಸಗಿ ಅಥವಾ ಜಿಲ್ಲಾ ಆಸ್ಪತ್ರೆಗೆ ಹೋಗಿ ಎಂದು ತಿಳಿಸಿದ್ದಾರೆ’ ಎಂದು ಶ್ರೀದೇವಿ ಎಂಬವರು ಅಳಲು ತೋಡಿಕೊಂಡರು.

ಕಳೆದ ವಾರ ಜನರಲ್ ಸರ್ಜನ್ ನೇಮಕ ಆಗಿದ್ದು ಈ ವಾರದಲ್ಲಿ ಕೆಲಸಕ್ಕೆ ಹಾಜರಾಗಬಹುದು. ಆದಷ್ಟು ಬೇಗ ಖಾಲಿ ಇರುವ ಹುದ್ದೆಗಳಿಗೆ ವೈದ್ಯರನ್ನು ನೇಮಕ ಮಾಡುವ ಕೆಲಸ ಮಾಡುತ್ತೇವೆ
ಡಾ.ಜಿ.ಪಿ.ರೇಣುಪ್ರಸಾದ್ ಜಿಲ್ಲಾ ಆರೋಗ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.