ಹೊಸದುರ್ಗ: ತಾಲ್ಲೂಕಿನ ಹೆಬ್ಬಳ್ಳಿ ಹಾಗೂ ಹೇರೂರು ನಡುವೆ ಚಿರತೆ ಸಂಚರಿಸುತ್ತಿದ್ದು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ನಿತ್ಯ ಬೆಳಿಗ್ಗೆ ಈ ಮಾರ್ಗದಲ್ಲಿ ಸಾರ್ವಜನಿಕರು ವಾಯುವಿಹಾರ ಮಾಡುತ್ತಾರೆ. ಗ್ರಾಮದ ಬೈಕ್ ಹಾಗೂ ಕಾರು ಸವಾರರಿಗೆ ಹಲವು ಬಾರಿ ಚಿರತೆ ದರ್ಶನ ನೀಡಿದ್ದು, ಕುರಿ, ದನಕರುಗಳ ಸಂರಕ್ಷಣೆ ಬಗ್ಗೆ ಗ್ರಾಮಸ್ಥರು ಚಿಂತೆಗೀಡಾಗಿದ್ದಾರೆ.
‘ವಾರದ ಹಿಂದೆ ಚಿರತೆ ಇಲ್ಲಿ ಓಡಾಡಿರುವ ಗುರುತುಗಳಿವೆ. ಅರಣ್ಯ ಇಲಾಖೆಯವರು ಬೋನ್ ಅಳವಡಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ನಿತ್ಯ ಜಮೀನುಗಳಿಗೆ ತೆರಳಲು ಭಯ ಪಡುವಂತಾಗಿದೆ. ರಾತ್ರಿ ಸಮಯದಲ್ಲಿ ಜಮೀನಿಗೆ ನೀರು ಹಾಯಿಸಲು ರೈತರು ಹೋಗುತ್ತಿಲ್ಲ. ಒಂದು ಕುರಿ ತಿಂದಿರುವ ಬಗ್ಗೆ ಗ್ರಾಮಸ್ಥರು ಮಾತನಾಡುತ್ತಿದ್ದರು. ಜನ, ದನಕರು, ಕುರಿ ರಕ್ಷಣೆಗೆ ಸಂಬಂಧಪಟ್ಟವರು ಮುಂದಾಗಬೇಕು’ ಎಂದು ಹೆಬ್ಬಳ್ಳಿ ಮಲ್ಲಿಕಾರ್ಜುನ ತಿಳಿಸಿದರು.
‘ಕೆಲ ದಿನಗಳಿಂದೆ ಬೋನ್ ಇರಿಸಿದ್ದರೂ ಚಿರತೆ ಸೆರೆಯಾಗಿಲ್ಲ, ಬೆಲಗೂರಿನಲ್ಲಿ ಬೋನ್ ಅಳವಡಿಸಲಾಗಿದೆ. ಹೆಬ್ಬಳ್ಳಿಯಲ್ಲಿ ಮತ್ತೆ ಚಿರತೆ ಕಂಡು ಬಂದರೆ ಬೋನ್ ಅಳವಡಿಸಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಸುಜಾತ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.