ಚಿತ್ರದುರ್ಗ: ಹಿರಿಯೂರು ತಾಲ್ಲೂಕು ಐಮಂಗಲ ಗ್ರಾಮದ ಪೊಲೀಸ್ ತರಬೇತಿ ಶಾಲೆಯಲ್ಲಿ ನಿತ್ಯ ನಡೆಯುವ ಪರೇಡ್ನಲ್ಲಿ ಶಿಸ್ತು, ಸಂಯಮ ಅಷ್ಟೇ ಇರುವುದಿಲ್ಲ. ಕನ್ನಡ ಕಮಾಂಡ್ ಜೊತೆಗೆ ಸ್ವರ, ರಾಗ, ಲಯ, ತಾಳಗಳೂ ಸಮ್ಮಿಳಿತವಾಗಿರುತ್ತವೆ.
ರಾಜ್ಯದ ವಿವಿಧೆಡೆಯಿಂದ ಬಂದಿರುವ 448 ಪ್ರಶಿಕ್ಷಣಾರ್ಥಿಗಳು ಇಲ್ಲಿ ಪೊಲೀಸ್ ತರಬೇತಿ ಪಡೆಯುತ್ತಿ ದ್ದಾರೆ. ಸಾಮಾನ್ಯವಾಗಿ ಪರೇಡ್ನಲ್ಲಿ ಸೂಚನೆಗಳು (ಕಮಾಂಡ್) ಹಿಂದಿ ಹಾಗೂ ಇಂಗ್ಲಿಷ್ನಲ್ಲಿರುತ್ತವೆ. ಆದರೆ ಇಲ್ಲಿ ಸಂಪೂರ್ಣವಾಗಿ ಕನ್ನಡಮಯವಾಗಿವೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಿಬ್ಬಂದಿ ಕನ್ನಡ ಭಾಷೆ, ಸಂಸ್ಕೃತಿ, ಇತಿಹಾಸ ಬಿಂಬಿಸುವ ಹಾಡುಗಳಿಗೆ ಪರೇಡ್ ಸಂಯೋಜನೆ ಮಾಡಿದ್ದಾರೆ. ದುರ್ಗದ ಇತಿಹಾಸ ಸಾರುವ ‘ನಾಗರ ಹಾವು’ ಚಲನಚಿತ್ರದ ‘ಕನ್ನಡ ನಾಡಿನ ವೀರರಮಣಿಯ’ ಗೀತೆಗೆ ಪರೇಡ್ ಸಂಯೋಜಿಸಿದ್ದಾರೆ. ತಾಳ, ಲಯದೊಂದಿಗೆ ಸಂಯೋಜನೆಗೊಂಡಿ ರುವ ಹೆಜ್ಜೆಗಳು ಆನಂದ ಸೃಷ್ಟಿಸುತ್ತವೆ.
ಅಂಬರೀಷ್ ಅಭಿನಯದ ‘ತಿರುಗು ಬಾಣ’ ಚಿತ್ರದ ‘ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ’ ಗೀತೆಯನ್ನೂ ಪೊಲೀಸ್ ಕವಾಯತಿಗೆ ಅಳವಡಿಸ
ಲಾಗಿದೆ. ಸಿಬ್ಬಂದಿಯ ವೇಗದ ಹೆಜ್ಜೆಯ ಲಯ, ಗತಿ ಗಮನ ಸೆಳೆಯುತ್ತದೆ.
‘ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ’ ಗೀತೆಗೂ ಪರೇಡ್ ಸಂಯೋಜಿಸಲಾಗಿದೆ. ಸಿಬ್ಬಂದಿಯ ನಿಧಾನಗತಿಯ ಹೆಜ್ಜೆಗಳು ‘ನಿತ್ಯೋತ್ಸವ’ ಗೀತೆಯ ಭಾವವನ್ನು ತೆರೆದಿಡುತ್ತವೆ.
ತದೇಕಚಿತ್ತರಾಗಿ ಹೆಜ್ಜೆ ಹಾಕುವ ಸಿಬ್ಬಂದಿ, ಒಮ್ಮೆ ಸಿಪಾಯಿಗಳಂತೆ ಕಂಡರೆ ಮತ್ತೊಮ್ಮೆ ಕಲಾವಿದರಂತೆ ಭಾಸವಾಗುತ್ತಾರೆ.
ಸಿಬ್ಬಂದಿಯನ್ನು ವಿವಿಧ ತುಕಡಿಗಳಾಗಿ ವಿಂಗಡಿಸಲಾಗಿದ್ದು, ಎಲ್ಲರೂ ಕನ್ನಡ ಸೂಚನೆಗಳನ್ನು ಪಾಲಿಸುತ್ತಾರೆ. ಇಬ್ಬರಿಂದ ಮೂವರು ಸಿಬ್ಬಂದಿ ಹಾಡುತ್ತಾ ಹೆಜ್ಜೆ ಹಾಕುತ್ತಾರೆ. ಅದಕ್ಕನುಗುಣ
ವಾಗಿ ಉಳಿದವರು ಮುನ್ನಡೆಯುತ್ತಾರೆ. ಮತ್ತಷ್ಟು ಗೀತೆಗಳ ಪರೇಡ್ ಸಂಯೋಜನೆ ಮುಂದುವರಿದಿದ್ದು, ವಿಷ್ಣುವರ್ಧನ್ ಅಭಿನಯದ, ಮೋಜುಗಾರ ಸೊಗಸುಗಾರ ಚಿತ್ರದ ‘ಕನ್ನಡವೇ ನಮ್ಮಮ್ಮ ಅವಳಿಗೆ ಕೈಮುಗಿಯಮ್ಮ’ ಗೀತೆಗೆ ಪರೇಡ್ ಸಿದ್ಧಗೊಳ್ಳುತ್ತಿದೆ.
‘10 ತಿಂಗಳ ಪೊಲೀಸ್ ತರಬೇತಿ ಚಿರಕಾಲ ಉಳಿಯಬೇಕು, ಸ್ಮರಣೀಯ ವಾಗಿರಬೇಕು ಎಂಬುದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಕುಮಾರ್ ಅವರ ಆಶಯ. ಈಚೆಗೆ ಚಿತ್ರದುರ್ಗದ ಕಲ್ಲಿನಕೋಟೆಗೆ ಭೇಟಿ ನೀಡಿದ್ದೆವು. ಆಗ ಮನಸ್ಸಿನೊಳಗೆ ಮೂಡಿದ ಚಿಂತನೆಗೆ ರೂಪ ಕೊಟ್ಟಾಗ ಸಂಗೀತಮಯ ಪರೇಡ್ ರೂಪುಗೊಂಡಿತು’ ಎಂದು ತರಬೇತಿ ಶಾಲೆಯ ಪ್ರಾಂಶುಪಾಲ ಎನ್.ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕೋಟೆಯೊಳಗೆ ಅರಳಿದ ಶಾಲೆ
ಪೊಲೀಸ್ ತರಬೇತಿ ಶಾಲೆ ನಡೆಯುತ್ತಿರುವ ಜಾಗ ಚಿತ್ರದುರ್ಗದ ಅರಸರ ಕಾಲದಲ್ಲಿ ಧಾನ್ಯ ಸಂಗ್ರಹಿಸುವ ತಾಣವಾಗಿತ್ತು. ಸುತ್ತಲೂ ಇರುವ ಕೋಟೆ ಈಗಲೂ ಸುಸ್ಥಿತಿಯಲ್ಲಿದೆ. ಇಲ್ಲಿಯ 58 ಎಕರೆ ಜಾಗದಲ್ಲಿ ಪೊಲೀಸ್ ತರಬೇತಿ ಶಾಲೆ ಇರುವುದರಿಂದ ಸ್ಮಾರಕವೂ ಸಂರಕ್ಷಣೆಯಾಗಿದೆ.ಅಲ್ಲಿ ವಿವಿಧ ಪ್ರಬೇಧದ 6000ಕ್ಕೂ ಅಧಿಕ ಗಿಡ–ಮರಗಳಿದ್ದು ಪ್ರಕೃತಿಯ ಮಡಿಲಲ್ಲಿ ಪೊಲೀಸ್ ತರಬೇತಿ ನಡೆಯುತ್ತದೆ. ಪೊಲೀಸ್ ಪರೇಡ್ ಸಂಗೀತಮಯ ಗೊಳ್ಳಲು ಇದೂ ಒಂದು ಕಾರಣ ಎಂದು ಪ್ರಶಿಕ್ಷಣಾರ್ಥಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.