ADVERTISEMENT

ಚಿತ್ರದುರ್ಗ: ಬಡವರ ಮೇಲೆ ಬ್ರಹ್ಮಾಸ್ತ್ರ, ಶ್ರೀಮಂತರಿಗೆ ಶ್ರೀರಕ್ಷೆ!

ವಿಜ್ಞಾನ ಕಾಲೇಜು ಮುಂದಿನ ಪೆಟ್ಟಿ ಅಂಗಡಿ ತೆರವಿಗೆ ಸೂಚನೆ, ವಿದ್ಯಾರ್ಥಿಗಳಿಗೆ ಉಪಾಹಾರದ ಚಿಂತೆ

ಎಂ.ಎನ್.ಯೋಗೇಶ್‌
Published 6 ಸೆಪ್ಟೆಂಬರ್ 2025, 5:01 IST
Last Updated 6 ಸೆಪ್ಟೆಂಬರ್ 2025, 5:01 IST
ಚಿತ್ರದುರ್ಗದ ವಿಜ್ಞಾನ ಕಾಲೇಜು ಮುಂಭಾಗದಲ್ಲಿರುವ ಪೆಟ್ಟಿ ಅಂಗಡಿಗಳು
ಚಿತ್ರದುರ್ಗದ ವಿಜ್ಞಾನ ಕಾಲೇಜು ಮುಂಭಾಗದಲ್ಲಿರುವ ಪೆಟ್ಟಿ ಅಂಗಡಿಗಳು   

ಚಿತ್ರದುರ್ಗ: ನಗರದ ಚಳ್ಳಕೆರೆ ಗೇಟ್‌ನಿಂದ ಕನಕ ವೃತ್ತದವರೆಗೂ ಪ್ರಭಾವಿಗಳು ಕಟ್ಟಿಕೊಂಡಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿಲ್ಲ. ಆದರೆ, ವಿಜ್ಞಾನ ಕಾಲೇಜು ಮುಂದಿನ ಸರ್ವೀಸ್‌ ರಸ್ತೆ ಬದಿಯಲ್ಲಿ ಬಡ ವ್ಯಾಪಾರಿಗಳು ನಡೆಸುತ್ತಿರುವ ಪೆಟ್ಟಿಗೆ ಅಂಗಡಿ ತೆರವುಗೊಳಿಸಲು ನಗರಸಭೆ ಅಧಿಕಾರಿಗಳು ಸೂಚಿಸಿರುವುದು ಅನ್ಯಾಯ, ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರದಂತಿದೆ’ ಎಂದು ಸಾರ್ವಜನಿಕರು, ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ವಿಜ್ಞಾನ ಕಾಲೇಜು, ಪದವಿಪೂರ್ವ ಕಾಲೇಜು, ಸ್ನಾತಕೋತ್ತರ ಕೇಂದ್ರಗಳಿಗೆ ಜಿಲ್ಲೆಯ ಮೂಲೆಮೂಲೆಯಿಂದ ಸಾವಿರಾರು ಬಡ ವಿದ್ಯಾರ್ಥಿಗಳು ಬರುತ್ತಾರೆ. ನಸುಕಿನಲ್ಲೇ ಎದ್ದು ಬಸ್‌ ಹಿಡಿದು ಬರುವ ವಿದ್ಯಾರ್ಥಿಗಳಿಗೆ ರಸ್ತೆ ಬದಿಯಲ್ಲಿರುವ ಪೆಟ್ಟಿಗೆ ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ಅಂದರೆ, ₹ 30ಕ್ಕೆ ತಿಂಡಿ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಕಾಲೇಜು ಸಿಬ್ಬಂದಿ, ಸಾರ್ವಜನಿಕರಿಗೂ ಈ ಅಂಗಡಿಗಳಿಂದ ಅನುಕೂಲವಾಗಿದೆ.

ರಸ್ತೆಬದಿಯಲ್ಲಿ 25–30 ಅಂಗಡಿಗಳಿದ್ದು ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದು ನಗರಸಭೆ ಅಧಿಕಾರಿಗಳು ಸೂಚಿಸಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ಕುಮಾರ್‌ ಬಂಡಾರು ಅವರ ಆದೇಶದ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂಬುದು ನಗರಸಭೆ ಕಾರಣ ನೀಡುತ್ತದೆ. ಭಾನುವಾರದೊಳಗೆ (ಸೆ.6) ಅಂಗಡಿ ತೆರವುಗೊಳಿಸದಿದ್ದರೆ ಬಲವಂತದ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಅಂಗಡಿ ವ್ಯಾಪಾರದಿಂದಲೇ ಜೀವನ ನಡೆಸುತ್ತಿರುವ ನೂರಾರು ಕುಟುಂಬಗಳು ಈ ತರಾತುರಿ ಕ್ರಮದಿಂದ ಬೀದಿಪಾಲಾಗುವ ಆತಂಕ ಎದುರಾಗಿದೆ.

‘ಗಣಪತಿ ಶೋಭಾಯಾತ್ರೆ ಅಂಗವಾಗಿ ತಾತ್ಕಾಲಿಕವಾಗಿ ಕ್ರಮ ವಹಿಸುತ್ತಿದ್ದಾರೆ ಎಂದು ನಾವು ಅಂದುಕೊಂಡಿದ್ದೆವು. ಆದರೆ ಶಾಶ್ವತವಾಗಿ ಅಂಗಡಿ ತೆಗೆಯುವಂತೆ ಸೂಚನೆ ಕೊಟ್ಟಿರುವುದರಿಂದ ಆತಂಕವಾಗಿದೆ. ಕಾಲೇಜು ಸುತ್ತಮುತ್ತ ಇರುವ ದೊಡ್ಡ ಹೋಟೆಲ್‌ ಮಾಲೀಕರ ಲಾಬಿಯಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂಬ ಅನುಮಾನ ಕಾಡುತ್ತಿದೆ’ ಎಂದು ಪೆಟ್ಟಿಗೆ ಅಂಗಡಿ ಮಾಲೀಕರೊಬ್ಬರು ತಿಳಿಸಿದರು.

3 ಗಂಟೆ ವ್ಯಾಪಾರ:

ಚಳ್ಳಕೆರೆ ಗೇಟ್‌ ಕಡೆಯಿಂದ ಹೆದ್ದಾರಿ ಎಡಭಾಗದ ಸರ್ವೀಸ್‌ ರಸ್ತೆಯಲ್ಲಿ ಈ ಪೆಟ್ಟಿಗೆ ಅಂಗಡಿಗಳಿವೆ. ಇವುಗಳಿಂದ ಹೆದ್ದಾರಿ ವಾಹನ, ಸರ್ವೀಸ್‌ ರಸ್ತೆ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ರಸ್ತೆ ಬದಿಯಲ್ಲಿ ಅಂಗಡಿ ಹಾಕಿಕೊಂಡಿದ್ದು ಅಲ್ಲಿ ಸಾಕಷ್ಟು ಜಾಗವಿದೆ. ಇವು ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಆಹಾರ ಮಾರಾಟ ಮಾಡುತ್ತವೆ. ಕಾಲೇಜು ಆರಂಭವಾಗುತ್ತಿದ್ದಂತೆಯೇ ಅಂಗಡಿ ಬಾಗಿಲು ಹಾಕಲಾಗುತ್ತದೆ.

ವಿದ್ಯಾರ್ಥಿಗಳು ಕಾಲೇಜಿಗೆ ಬಂದಾಗ ಬೆಳಿಗ್ಗೆ ತಿಂಡಿಗಾಗಿ 3 ಗಂಟೆ ಮಾತ್ರ ಪೆಟ್ಟಿ ಅಂಗಡಿಗಳು ತೆರೆದಿರುತ್ತವೆ. ಈ ಅವಧಿಯ ಚಟುವಟಿಕೆಯಿಂದ ಸಂಚಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಆದರೂ ಪೊಲೀಸರು, ನಗರಸಭೆ ಅಧಿಕಾರಿಗಳು ಅಂಗಡಿ ತೆರವಿಗೆ ಕ್ರಮ ಕೈಗೊಂಡಿರುವುದು ಅನುಮಾನಾಸ್ಪದ ಎಂದು ಅಂಗಡಿಕಾರರು ಆರೋಪಿಸುತ್ತಾರೆ.

‘ನಾವು ಕೊಡುವ ರುಚಿಯನ್ನು ದೊಡ್ಡ ಅಂಗಡಿಗಳೂ ನೀಡುವುದಿಲ್ಲ. ಗುಣಮಟ್ಟದ ಎಣ್ಣೆ, ಪದಾರ್ಥಗಳನ್ನು ಬಳಸುತ್ತೇವೆ. ಆಹಾರ ಇಲಾಖೆ ಅಧಿಕಾರಿಗಳು ಬೇಕಿದ್ದರೆ ಪರೀಕ್ಷೆ ನಡೆಸಲಿ. ಗುಣಮಟ್ಟದ ಆಹಾರ ನೀಡುತ್ತಿದ್ದರೂ ನಮ್ಮ ಮೇಲೆ ನಗರಸಭೆ ಅಧಿಕಾರಿಗಳು ಬ್ರಹ್ಮಾಸ್ತ್ರ ಹೂಡಿ ತೆರವುಗೊಳಿಸಲು ಮುಂದಾಗಿದ್ದಾರೆ’ ಎಂದು ಅಂಗಡಿ ಮಾಲೀಕರಾದ ರಾಜಶೇಖರ್‌ ಬೇಸರ ವ್ಯಕ್ತಪಡಿಸಿದರು.

ಗಣಪತಿ ಶೋಭಾಯಾತ್ರೆಗಾಗಿ ತಾತ್ಕಾಲಿಕ ಕ್ರಮ ಕೈಗೊಳ್ಳಲು ಪೊಲೀಸರು ತಿಳಿಸಿದ್ದರು. ಶಾಶ್ವತವಾಗಿ ತೆರವುಗೊಳಿಸಲು ಸೂಚನೆ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಪರಿಶೀಲಿಸಲಾಗುವುದು
ಎಸ್‌.ಲಕ್ಷ್ಮಿ ಪೌರಾಯುಕ್ತೆ
ಸಣ್ಣಪುಟ್ಟ ಕ್ಯಾಂಟೀನ್‌ಗಳಲ್ಲಿ ತಿಂಡಿ ತಿಂದು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶ್ರೀಮಂತರ ಹೋಟೆಲ್‌ಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇವುಗಳನ್ನು ಮುಚ್ಚಿಸುವುದು ಸರಿಯಲ್ಲ
ಎನ್‌.ಧನಂಜಯ ವಿದ್ಯಾರ್ಥಿ

ಎಂಎಲ್‌ಎ ಇಲ್ಲದಿದ್ದಾಗ ತೆರವಿಗೆ ಕ್ರಮ:

‘ಈಗಾಗಲೇ ಹಲವು ಬಾರಿ ನಮ್ಮ ಅಂಗಡಿ ತೆರವುಗೊಳಿಸಲು ಅಧಿಕಾರಿಗಳು ಪ್ರಯತ್ನಿಸಿದ್ದರು. ಸ್ಥಳೀಯ ಜನಪ್ರತಿನಿಧಿಗಳು ನಮ್ಮನ್ನು ಇಲ್ಲಿಯವರೆಗೂ ರಕ್ಷಣೆ ಮಾಡುತ್ತಿದ್ದರು. ಶಾಸಕ ಕೆ.ಸಿ. ವೀರೇಂದ್ರ ಅವರು ಇ.ಡಿ.  ವಶದಲ್ಲಿರುವಾಗ ಉಪಾಯ ಮಾಡಿ ನಮ್ಮನ್ನು ತೆರವುಗೊಳಿಸುತ್ತಿದ್ದಾರೆ’ ಎಂದು ಅಂಗಡಿ ಮಾಲೀಕರು ಆರೋಪಿಸಿದರು. ‘ನಗರಸಭೆ ಅಧ್ಯಕ್ಷರನ್ನು ಭೇಟಿ ಮಾಡಿ ಅಂಗಡಿ ತೆರವು ಮಾಡದಂತೆ ಮನವಿ ಮಾಡುತ್ತೇವೆ. ನಮ್ಮ ಜೊತೆ ಕಾಲೇಜು ವಿದ್ಯಾರ್ಥಿಗಳೂ ಬರುವುದಾಗಿ ತಿಳಿಸಿದ್ದಾರೆ. ಕಡಿಮೆ ಬೆಲೆಗೆ ಆಹಾರ ಒದಗಿಸುವ ಬಡ ವ್ಯಾಪಾರಿಗಳನ್ನು ನಗರಸಭೆ ಸದಸ್ಯರು ಅಧ್ಯಕ್ಷರು ರಕ್ಷಿಸಬೇಕು’ ಎಂದು ಅವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.