ಅಪಘಾತ
–ಪ್ರಾತಿನಿಧಿಕ ಚಿತ್ರ
ಚಿತ್ರದುರ್ಗ: ತಾಲ್ಲೂಕಿನ ಸೀಬಾರ ಬಳಿ ರಾಷ್ಟ್ರೀಯ ಹೆದ್ದಾರಿ–48ರ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ಬಂದ ಇನ್ನೆರಡು ಲಾರಿಗಳು ಡಿಕ್ಕಿ ಹೊಡೆದ ಪರಿಣಾಮ ಬುಧವಾರ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶ, ತಾಡಪತ್ರಿ ಗ್ರಾಮದ ಶೇಖರ್ (55), ತಮಿಳುನಾಡು, ಧರ್ಮಪುರಿಯ ಪೆರಿಯಸ್ವಾಮಿ (50), ಉತ್ತರ ಪ್ರದೇಶ, ಅಲಿಗಡದ ಜಬರುದ್ದೀನ್ (52) ಮೃತಪಟ್ಟವರು. ಲಾರಿಗಳು ಮುಂಬೈನಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದವು. ಬಟ್ಟೆ ತುಂಬಿದ್ದ ಲಾರಿ ಟೈರ್ ಸ್ಫೋಟಗೊಂಡು ರಸ್ತೆ ಬದಿಯಲ್ಲಿ ನಿಂತಿತ್ತು. ಚಾಲಕ ವಾಹನದ ಟೈರ್ ಬದಲಾವಣೆ ಮಾಡುತ್ತಿದ್ದರು.
ಹಿಂದಿನಿಂದ ಬಂದ ಭತ್ತ ತುಂಬಿದ್ದ ಲಾರಿ ನಿಂತಿದ್ದ ಲಾರಿಗೆ ಡಿಕ್ಕಿಯಾಗಿದೆ. ಭತ್ತ ತುಂಬಿದ್ದ ಲಾರಿಗೆ ಹಿಂದಿನಿಂದ ಬಂದ ಕಲ್ಲಂಗಡಿ ತುಂಬಿದ್ದ ಲಾರಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮೂರೂ ವಾಹನಗಳ ಚಾಲಕರು ಸ್ಥಳದಲ್ಲೇ ಮೃತಪಟ್ಟರು.
ಅಪಘಾತದ ನಂತರ ರಸ್ತೆಯಲ್ಲಿ ಬಟ್ಟೆ, ಭತ್ತ, ಕಲ್ಲಂಗಡಿ ಹಣ್ಣುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಮೃತದೇಹಗಳನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರ ಮಾಡಿದ ನಂತರ ಅಪಘಾತವಾಗಿದ್ದ ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.