ಚಿತ್ರದುರ್ಗ: ಕೋಡಿ ಬಿದ್ದ ವಿವಿ ಸಾಗರ ಜಲಾಶಯ- ಹಿನ್ನೀರು ಭಾಗದ ಮನೆಗಳಿಗೆ ನೀರು
ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯ ವರ್ಷದಲ್ಲಿ 2ನೇ ಬಾರಿಗೆ ಭರ್ತಿಯಾಗಿದ್ದು ಕೋಡಿಯಲ್ಲಿ ನೀರು ಹರಿಯುತ್ತಿದೆ. ಆದರೆ, ಹೊಸದುರ್ಗ ತಾಲ್ಲೂಕಿನ ಹಿನ್ನೀರು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳು ಮನೆಯಿಂದ ಹೊರ ಬರುತ್ತಿದ್ದಾರೆ.
ಮಲೆನಾಡು ಭಾಗದಲ್ಲಿ ಧಾರಕಾರ ಮಳೆ ಸುರಿಯುತ್ತಿರುವ ಕಾರಣ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಸದ್ಯ ಜಲಾಶಯಕ್ಕೆ 5,823 ಕ್ಯುಸೆಕ್ ಒಳಹರಿವು ಇದೆ. 3,985 ಕ್ಯುಸೆಕ್ ಹೊರಹರಿವು ಇದೆ. ಜಲಾಶಯದ ಕೋಡಿ ಭಾಗದಲ್ಲಿ ನೀರು ಹೊರಗೆ ಹರಿದು ಹೋಗುವುದನ್ನು ನೋಡಲು ಸುತ್ತಮುತ್ತಲ ಹಳ್ಳಿ ಜನರು, ಪ್ರವಾಸಿಗರು ಸ್ಥಳಕ್ಕೆ ಬರುತ್ತಿದ್ದಾರೆ.
ಹಿನ್ನೀರು ಭಾಗದ ಪೂಜಾರಹಟ್ಟಿ, ಮಲ್ಲಾಪುರ ಗ್ರಾಮಗಳ ಹಲವು ಮನೆಗಳಿಗೆ ನೀರು ನುಗ್ಗಿರುವ ಕಾರಣ ಜನರು ಮನೆ ಬಿಡುತ್ತಿದ್ದಾರೆ. ಬೇವಿನಹಳ್ಳಿ ಸಂಪರ್ಕ ಸೇತುವೆ ಮುಳುಗಡೆಯಾಗಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಜಲಾಶಯ ನಿರ್ಮಾಣವಾದ ನಂತರ 4ನೇ ಬಾರಿಗೆ ಕೋಡಿ ಬಿದ್ದಿದೆ. 1907ರಲ್ಲಿ ಜಲಾಶಯ ನಿರ್ಮಾಣಗೊಂಡ ನಂತರ 1933ರಲ್ಲಿ ಮೊದಲ ಬಾರಿಗೆ ಭರ್ತಿಯಾಗಿತ್ತು. 89 ವರ್ಷಗಳ ನಂತರ 2022ರಲ್ಲಿ 2ನೇ ಬಾರಿಗೆ ತುಂಬಿತ್ತು. 2025 ಜನವರಿಯಲ್ಲಿ 3ನೇ ಬಾರಿಗೆ, ಇದೀಗ ವರ್ಷದಲ್ಲಿ 2ನೇ ಬಾರಿಗೆ ತುಂಬಿ ಕೋಡಿ ಬಿದ್ದಿದೆ. ವೇದಾವತಿ ನದಿಗೆ ಭದ್ರಾ ಮೇಲ್ದಂಡೆ ನೀರು ಹರಿಸಲಾಗುತ್ತಿದೆ.