
ಚಿತ್ರದುರ್ಗ: ತಾಲ್ಲೂಕಿನ ಭೀಮಸಮುದ್ರ ಗ್ರಾಮದೊಳಗೆ ಗಣಿ ಲಾರಿಗಳು ಓಡಾಡುತ್ತಿರುವ ಕಾರಣ ಸ್ಥಳೀಯರು ದೂಳಿನಿಂದ ಕಂಗಾಲಾಗಿದ್ದಾರೆ. ಕೃಷಿ ಬೆಳೆಗಳು ಹಾನಿಗೀಡಾಗುತ್ತಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಲಾರಿಗಳಿಗೆ ಊರಿನಿಂದ ಹೊರಗೆ ಓಡಾಡುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಸದಸ್ಯರು, ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ನಿಯಮಾನುಸಾರ ನಿಗದಿತ ಮಾರ್ಗದಲ್ಲೇ ಲಾರಿಗಳು ಓಡಾಡಬೇಕು. ಆದರೆ, ಲಾರಿ ಮಾಲೀಕರು, ಚಾಲಕರು ನಿಯಮ ಉಲ್ಲಂಘಿಸಿ ಗ್ರಾಮದ ಹೃದಯ ಭಾಗದಲ್ಲೇ ಓಡಿಸುತ್ತಿದ್ದಾರೆ. ದೂಳಿನಿಂದ ಗ್ರಾಮಸ್ಥರು ವಿವಿಧ ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಪ್ರತಿಭಟನೆ ನಡೆಸಿ ಲಾರಿಗಳು ಊರಿನೊಳಗೆ ಬಾರದಂತೆ ತಡೆಯಲಾಗಿದೆ. ಮುಂದೆ ಗ್ರಾಮದೊಳಗೆ ಲಾರಿಗಳು ಬಾರದಂತೆ ಜಿಲ್ಲಾಧಿಕಾರಿ ಕ್ರಮ ವಹಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
‘ಬೃಹತ್ ಲಾರಿಗಳು, ಟ್ರಕ್ಗಳು ಓಡಾಡುತ್ತಿರುವ ಕಾರಣ ರಸ್ತೆಗಳು ಹಾಳಾಗುತ್ತಿವೆ. ಕಬ್ಬಿಣದ ಅದಿರಿನಿಂದ ಬರುವ ದೂಳು ಮಾರಕ ಪರಿಣಾಮ ಬೀರುತ್ತಿದೆ. ಲಾರಿಗಳ ಓಡಾಟ ನಿಯಂತ್ರಣ ಮಾಡುವಂತೆ ಒತ್ತಾಯ ಮಾಡಿ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರೈಲ್ವೆ ವ್ಯಾಗನ್ ಮೂಲಕ ಅದಿರು ಸಾಗಾಟ ಮಾಡಿಸಿದರೆ ನಮಗೆ ಯಾವ ತೊಂದರೆಯೂ ಆಗುವುದಿಲ್ಲ. ರಸ್ತೆಗಳೂ ಹಾಳಾಗುವುದಿಲ್ಲ. ಜನರ ಆರೋಗ್ಯವೂ ಚೆನ್ನಾಗಿರುತ್ತದೆ. ರೈತರ ಬೆಳೆಗಳನ್ನು ದೂಳಿನಿಂದ ರಕ್ಷಣೆ ಮಾಡಬೇಕಾದರೆ ಗಣಿ ಲಾರಿಗಳ ಓಡಾಟ ತಪ್ಪಿಸಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಸಭೆ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಖಂಡರ ಸಭೆ ಕರೆದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ‘ಊರಿನೊಳಗೆ ಗಣಿ ಲಾರಿಗಳು ಓಡಾಡದಂತೆ ಕ್ರಮ ಕೈಗೊಳ್ಳಲು ಇನ್ನೆರಡು ದಿನದಲ್ಲಿ ಅಧಿಕಾರಿಗಳ ಸಭೆ ಕರೆಯಲಾಗುವುದು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಮಾಹಿತಿ ಪಡೆಯಲಾಗುವುದು. ರೈತ ಮುಖಂಡರ ಜೊತೆಯಲ್ಲೂ ಮಾತನಾಡಲಾಗುವುದು’ ಎಂದರು.
ರೈತ ಮುಖಂಡರಾದ ಕೆ.ಪಿ.ಭೂತಯ್ಯ, ಹಂಪಯ್ಯನಮಾಳಿಗೆ ಧನಂಜಯ, ಬಸ್ತಿಹಳ್ಳಿ ಸುರೇಶ್ ಬಾಬು, ಪೂರ್ಯನಾಯ್ಕ, ರಘು, ಈರಣ್ಣ, ಬಸವರಾಜು, ವೀರೇಶ್, ಕುಮಾರ್, ಜಗದೀಶ್, ಪ್ರಸನ್ನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.