ಹೊಳಲ್ಕೆರೆ: ರಸ್ತೆ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಮುಗಿಸಬೇಕು ಎಂದು ಶಾಸಕ ಎಂ.ಚಂದ್ರಪ್ಪ ಅವರು ಗುತ್ತಿಗೆದಾರರು ಹಾಗೂ ಎಂಜಿನಿಯರ್ಗಳಿಗೆ ಸೂಚಿಸಿದರು.
ತಾಲ್ಲೂಕಿನ ಅರಬಘಟ್ಟದಲ್ಲಿ ಬುಧವಾರ ರಸ್ತೆ ಕಾಮಗಾರಿ ವೀಕ್ಷಿಸಿ ಮಾತನಾಡಿದರು.
‘ಗಂಗಸಮುದ್ರದಿಂದ ಅರಬಘಟ್ಟ ಮಾರ್ಗದಲ್ಲಿ ₹3.5 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ಕೆರೆಯ ಏರಿಯ ಮೇಲೆ 2.5 ಕಿ.ಮೀ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಅರಬಘಟ್ಟ ಗ್ರಾಮದಲ್ಲಿಯೂ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು, ಉಳಿದ ಭಾಗದಲ್ಲಿ ಮಳೆ ಮುಗಿದ ನಂತರ ಡಾಂಬರೀಕರಣ ಮಾಡಲಾಗುವುದು’ ಎಂದರು.
‘ಬಿದರಕೆರೆ ಹಾಗೂ ಮುದ್ದಾಪುರದಲ್ಲಿ ತಲಾ ₹1 ಕೋಟಿ ವೆಚ್ಚದಲ್ಲಿ ಎರಡು ಕೆರೆಗಳನ್ನು ನಿರ್ಮಿಸಲಾಗುತ್ತಿದೆ. ಮುದ್ದಾಪುರ ಲಂಬಾಣಿ ಹಟ್ಟಿಯಲ್ಲಿ ₹15 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು. ದೇವರ ಹೊಸಹಳ್ಳಿಯಲ್ಲಿ ₹1 ಕೋಟಿ ವೆಚ್ಚದ ಡಾಂಬರ್ ರಸ್ತೆ ಹಾಗೂ ₹20 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿದೆ. ಈ ಭಾಗ ಗಡಿಭಾಗವಾಗಿದ್ದು, ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ರಾಮಗಿರಿ ಪಟ್ಟಣದ ಪ್ರಮುಖ ವೃತ್ತದ ನಾಲ್ಕು ಕಡೆಯೂ ರಸ್ತೆಗಳನ್ನು ವಿಸ್ತರಿಸಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗಿದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ವರಪ್ಪ, ಗುತ್ತಿಗೆದಾರ ರಾಜಶೇಖರ್, ಪ್ರವೀಣ್, ಆಪ್ತ ಸಹಾಯಕ ಪಣಿಯಪ್ಪ, ನಿವೃತ್ತ ಶಿಕ್ಷಕ ಶೇಖರಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.