ADVERTISEMENT

ಸಿರಿಗೆರೆ: ‘ಕೈ’ ಮುಖಂಡರಿಂದ ಬಿಜೆಪಿ ಶಾಸಕರಿಗೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 6:48 IST
Last Updated 19 ಜನವರಿ 2026, 6:48 IST
ಲಿಂಗವ್ವನಾಗತಿಹಳ್ಳಿ ಗ್ರಾಮದ ಬಳಿ ಹರಿಯುವ ಹಳ್ಳಕ್ಕೆ ನೂತನ ಚೆಕ್‍ಡ್ಯಾಂ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿ ಪೂಜೆ ನಡೆಸಿದರು
ಲಿಂಗವ್ವನಾಗತಿಹಳ್ಳಿ ಗ್ರಾಮದ ಬಳಿ ಹರಿಯುವ ಹಳ್ಳಕ್ಕೆ ನೂತನ ಚೆಕ್‍ಡ್ಯಾಂ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿ ಪೂಜೆ ನಡೆಸಿದರು   

ಸಿರಿಗೆರೆ: ಕಾಂಗ್ರೆಸ್‌ ಮುಖಂಡರಾದ ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ ಹಾಗೂ ಚಿಕ್ಕಬೆನ್ನೂರು ಗೌಡ್ರ ಜಿ.ಬಿ. ತೀರ್ಥಪ್ಪ ಅವರು ಹೊಳಲ್ಕೆರೆ ಬಿಜೆಪಿ ಶಾಸಕ ಎಂ. ಚಂದ್ರಪ್ಪ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಘಟನೆ ಭಾನುವಾರ ನಡೆಯಿತು. 

ಸಿರಿಗೆರೆ ಸಮೀಪದ ಲಿಂಗವ್ವನಾಗತಿಹಳ್ಳಿಯಲ್ಲಿ ₹2 ಕೋಟಿ ವೆಚ್ಚದಲ್ಲಿ ಚೆಕ್‌ಡ್ಯಾಂ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಆಗಮಿಸಿದ್ದ ಶಾಸಕ ಎಂ. ಚಂದ್ರಪ್ಪ ಅವರನ್ನು ಕಾಂಗ್ರೆಸ್‌ ಮುಖಂಡ ತಿಪ್ಪೇಸ್ವಾಮಿ ಸ್ವಾಗತಿಸಿದರು. ನಂತರ ವೇದಿಕೆಯಲ್ಲಿ ಅವರ ಗುಣಗಾನ ಮಾಡಿದರು. 

‘ನಾನು ಕಾಂಗ್ರೆಸ್‌ ಮುಖಂಡನೇ ಇರಬಹುದು. ಆದರೆ, ಸಚಿವರೂ ಅಲ್ಲದ ಎಂ. ಚಂದ್ರಪ್ಪ ಇಷ್ಟೆಲ್ಲಾ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್‌ ಶಾಸಕರು ಅನುದಾನ ಕೊರತೆಯಿಂದ ಚರಂಡಿಗಳನ್ನೂ ಸ್ವಚ್ಛಗೊಳಿಸಲಾಗುತ್ತಿಲ್ಲ. ಚಂದ್ರಪ್ಪ ಅಭಿವೃದ್ಧಿಯ ಹರಿಕಾರ’ ಎಂದರು. 

ADVERTISEMENT

ಚಿಕ್ಕಬೆನ್ನೂರು ತೀರ್ಥಪ್ಪ ಮಾತನಾಡಿ ‘ನಾನು ಹಲವು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದೆ. ಚಂದ್ರಪ್ಪನವರ ಅವಿರತ ಶ್ರಮ, ಜನರೊಡನಿರುವ ವಿಶ್ವಾಸಕ್ಕೆ ಮನಸೋತಿರುವೆ’ ಎಂದರು. 

ಶಾಸಕ ಎಂ.ಚಂದ್ರಪ್ಪ ಮಾತನಾಡಿ, ‘ಜನರು ಅಭಿವೃದ್ಧಿಪರ ಮತ್ತು ಸ್ನೇಹಸಂಪನ್ನತೆಯನ್ನು ಬಯಸುತ್ತಾರೆ’ ಎಂದರು. 

‘ಲಿಂಗವ್ವನಾಗತಿಹಳ್ಳಿ ನಾನು ಮೊದಲು ಶಾಸಕನಾಗಿದ್ದ ಭರಮಸಾಗರ ಕ್ಷೇತ್ರಕ್ಕೆ ಸೇರುತ್ತದೆ. ಇಲ್ಲಿ ನಾನು ಮೊದಲ ಬಾರಿ ಶಾಸಕನಾದಾಗ ಊರಲ್ಲಿ ರಸ್ತೆಗಳೇ ಇರಲಿಲ್ಲ. ಕುಡಿಯುವ ನೀರು ಇರಲಿಲ್ಲ. ನಾನು ಅಭಿವೃದ್ಧಿಯ ಕೆಲಸ ಮಾಡಿದ್ದೇನೆ’ ಎಂದರು. 

ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಟಿ.ಬಸವರಾಜ್, ಶೈಲೇಶ್‍ಕುಮಾರ್, ತಿಪ್ಪೇಸ್ವಾಮಿ, ಮೋಹನ್‍ಕುಮಾರ್, ಪ್ರಕಾಶ್, ರಾಜಣ್ಣ, ಹರೀಶ್, ಕುಬೇರಪ್ಪ, ತಿಪ್ಪಣ್ಣ, ಮೌನೇಶ್, ಬಸಣ್ಣ, ಕಣುಮಪ್ಪ, ಗುತ್ತಿಗೆದಾರ ಎಚ್.ಜಗದೀಶ್ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.