ಚಿತ್ರದುರ್ಗ: ರಾಗಿ ಖರೀದಿ ಹಣವನ್ನು ರೈತರ ಖಾತೆಗೆ ಕೂಡಲೇ ಜಮಾ ಮಾಡಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರು ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆ. ಹೊಸದುರ್ಗ, ಹಿರಿಯೂರು, ಹೊಳಲ್ಕೆರೆ, ಚಿತ್ರದುರ್ಗ ತಾಲ್ಲೂಕಿನ ಬಹುತೇಕ ರೈತರು ರಾಗಿ ಬೆಳೆದಿದ್ದಾರೆ. ಪ್ರತಿ ಕ್ವಿಂಟಲ್ ರಾಗಿಗೆ ಸರ್ಕಾರ ₹ 3,200 ಬೆಂಬಲ ಬೆಲೆ ಘೋಷಣೆ ಮಾಡಿದೆ. ಬೆಂಬಲ ಬೆಲೆಯ ಆಸೆಗೆ ರಾಗಿ ಮಾರಾಟ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ಸಾಕಷ್ಟು ಅವ್ಯವಸ್ಥೆ ಸೃಷ್ಟಿಯಾಗಿತ್ತು. ಕೇಂದ್ರಕ್ಕೆ ಬರುವ ರೈತರ ರಾಗಿ ನಾಲ್ಕು ದಿನ ಕಳೆದರೂ ಖರೀದಿ ಆಗುತ್ತಿರಲಿಲ್ಲ. ವಾಹನ ಬಾಡಿಗೆ ನಿರೀಕ್ಷೆ ಮೀರಿ ಹೆಚ್ಚಾಗಿತ್ತು. ಸಂಕಷ್ಟಗಳನ್ನು ಅನುಭವಿಸಿ ರಾಗಿ ಮಾರಾಟ ಮಾಡಿದ ರೈತರು ಹಣಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.
ಪೂರ್ವ ಮುಂಗಾರು ಮಳೆ ಉತ್ತಮವಾಗಿದ್ದು, ಬಿತ್ತನೆ ಆರಂಭವಾಗಿದೆ. ಬೀಜ, ಗೊಬ್ಬರ ಖರೀದಿಗೆ ರೈತರ ಬಳಿ ಹಣವಿಲ್ಲ. ಮಾರ್ಚ್ ಅಂತ್ಯದ ವೇಳೆಗೆ ಖರೀದಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಆಶ್ವಾಸನೆ ನೀಡಿದ್ದ ಸರ್ಕಾರ ಮೈಮರೆತು ವರ್ತಿಸುತ್ತಿದೆ ಎಂದು ದೂರಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೆಹಳ್ಳಿ ಉಲ್ಲಾಸ್, ಉಪಾಧ್ಯಕ್ಷ ವಾಸಿಂ, ಕಾರ್ಯದರ್ಶಿ ರಫಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.