ಚಿತ್ರದುರ್ಗ: ನವದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲಿಗಿ ಜಮಾತ್ನ ಧಾರ್ಮಿಕ ಸಭೆಗೆ ಜಿಲ್ಲೆಯ ಇಬ್ಬರು ಹಾಜರಾಗಿರುವುದು ಬೆಳಕಿಗೆ ಬಂದಿದ್ದು, ಇವರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಗುರುವಾರ ಸಂಗ್ರಹಿಸಲಾಗುತ್ತಿದೆ.
ಧಾರ್ಮಿಕ ಸಭೆಗೆ ಕರ್ನಾಟಕದಿಂದ ಹಾಜರಾಗಿದ್ದ 54 ಜನರಲ್ಲಿ ಹಿರಿಯೂರು ಮತ್ತು ಚಿತ್ರದುರ್ಗ ನಗರದ ಇಬ್ಬರು ನಿವಾಸಿಗಳು ಇದ್ದರು ಎಂಬುದನ್ನು ಜಿಲ್ಲಾಡಳಿತ ಬುಧವಾರ ಪತ್ತೆ ಮಾಡಿದೆ. ಇಬ್ಬರ ಆರೋಗ್ಯವೂ ಸ್ಥರವಾಗಿರುವುದು ಗೊತ್ತಾಗಿದೆ. ಆದರೂ, ಕ್ವಾರಂಟೈನ್ಗೆ ಸೂಚನೆ ನೀಡಲಾಗಿದೆ.
‘ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯ ಇಬ್ಬರು ಪಾಲ್ಗೊಂಡಿದ್ದರು. ಅವರ ವಿವರಗಳನ್ನು ಪಡೆದು ಪತ್ತೆ ಮಾಡಿದ್ದೇವೆ. ದೆಹಲಿಯಿಂದ ಮರಳಿ 20 ದಿನಗಳು ಕಳೆದಿವೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡಿಲ್ಲ. ಆದರೂ, ಅವರನ್ನು ಕ್ವಾರಂಟೈನ್ಗೆ ಇಡಲು ತಾಕೀತು ಮಾಡಲಾಗಿದೆ. ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಮಾಹಿತಿ ನೀಡಿದ್ದಾರೆ.
ನವದೆಹಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುವುದು ಹೆಚ್ಚಾಗುತ್ತಿದ್ದಂತೆ ಹಿರಿಯೂರಿನಲ್ಲಿ ಆತಂಕ ಮನೆ ಮಾಡಿತ್ತು. ಮಸೀದಿಯೊಂದರಲ್ಲಿ ವಾಸ್ತವ್ಯ ಹೂಡಿದ್ದ ಮುಸ್ಲಿಂ ಧಾರ್ಮಿಕ ಗುರುಗಳು ದೆಹಲಿಯಿಂದ ಮರಳಿದವರು ಎಂಬ ವದಂತಿ ಹಬ್ಬಿತ್ತು. ಇವರನ್ನು ಜಿಲ್ಲಾಡಳಿತ ಮನವೊಲಿಸಿ ಹಾಸ್ಟೆಲ್ವೊಂದಕ್ಕೆ ಸ್ಥಳಾಂತರಿಸಿದೆ. ಅಲ್ಲಿಯೇ ಕ್ವಾರಂಟೈನ್ ಮಾಡಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ನಿಗಾ ಇಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.