ADVERTISEMENT

ಹಿರಿಯೂರು: ವಾಣಿವಿಲಾಸ ಜಲಾಶಯ ಭರ್ತಿಗೆ ಕ್ಷಣಗಣನೆ

1933ರ ನಂತರ ಮೊದಲ ಬಾರಿಗೆ ಭರ್ತಿಯಾಗುವತ್ತ ಜಲಾಶಯ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 4:41 IST
Last Updated 2 ಸೆಪ್ಟೆಂಬರ್ 2022, 4:41 IST
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯ ಕೋಡಿ ಬೀಳುವುದನ್ನು ನೋಡಲು ಜನರು ಬರುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್ ಹಾಕಿರುವುದು
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯ ಕೋಡಿ ಬೀಳುವುದನ್ನು ನೋಡಲು ಜನರು ಬರುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್ ಹಾಕಿರುವುದು   

ಹಿರಿಯೂರು: ವಾಣಿವಿಲಾಸ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, 89 ವರ್ಷಗಳ ನಂತರ ಮೊದಲನೇ ಬಾರಿಗೆ ಜಲಾಶಯದ ಕೋಡಿ ಬೀಳುವುದಕ್ಕೆ ಕ್ಷಣಗಣನೆ ಆರಂಭವಾಗಿದೆ.

1933ರ ನಂತರ ಇದೇ ಮೊದಲ ಬಾರಿಗೆ ಜಲಾಶಯ ಭರ್ತಿಯಾಗುತ್ತಿದ್ದು, ಕೋಡಿಬೀಳುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೂರಾರು ಜನರು ಜಲಾಶಯದತ್ತ ಬರುತ್ತಿದ್ದಾರೆ.

ಕೋಡಿ ಬೀಳಲು ಶುಕ್ರವಾರ ಬೆಳಗಿನ ಜಾವದವರೆಗೆ ಕಾಯಬೇಕು ಎಂದು ವಿಶ್ವೇಶ್ವರಯ್ಯ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಶುಕ್ರವಾರದ ವೇಳೆಗೆ ಜಲಾಶಯ ಭರ್ತಿಯಾಗಿ ಕೋಡಿ ಬೀಳುವ ಮೂಲಕ ನೀರು ನದಿಗೆ ಹರಿಯುವ ಸಾಧ್ಯತೆ ಇರುವುದರಿಂದ ಪೊಲೀಸರು ನೆರೆದಿದ್ದ ಜನರನ್ನು ವಾಪಸ್‌ ಕಳುಹಿಸಲು ಹರಸಾಹಸಪಟ್ಟರು. ಜಲಾಶಯದ ಸಮೀಪಕ್ಕೆ ಜನರು ತೆರಳದಂತೆ ತಡೆದರು. 130 ಅಡಿ ಗರಿಷ್ಠ ಮಟ್ಟದ ಜಲಾಶಯದ ನೀರಿನ ಮಟ್ಟ ಗುರುವಾರ 129.85 ಅಡಿ ತಲುಪಿದೆ. ಒಳಹರಿವು 3,546 ಕ್ಯುಸೆಕ್ ಇದ್ದ ಕಾರಣ ಸಾವಿರಾರು ಜನರು ಕಾತುರದಿಂದ ಕಾಯುತ್ತಿದ್ದರು.

1933ರಲ್ಲಿ ಜಲಾಶಯದ ಗರಿಷ್ಠ ನೀರಿನ ಮಟ್ಟ 135.25 ಅಡಿ ಇತ್ತು. ಪೂರ್ಣ ಭರ್ತಿಯಾದ ಬಳಿಕ ಜಲಾಶಯದ ಬಲಬದಿಯಲ್ಲಿ ಕೋಡಿ ಹರಿಯುತ್ತಿತ್ತು. ಸುರಕ್ಷತೆಯ ದೃಷ್ಟಿಯಿಂದ ಜಲಾಶಯದ ಗರಿಷ್ಠ ಮಟ್ಟವನ್ನು 130 ಅಡಿಗೆ ಇಳಿಸಲಾಗಿದೆ. ಇದಕ್ಕಾಗಿ ಹೊಸ ಕೋಡಿ ನಿರ್ಮಿಸಲಾಗಿದೆ. ಹಿರಿಯೂರು ಹಾಗೂ ಹೊಸದುರ್ಗ ತಾಲ್ಲೂಕಿನ ಗಡಿಯ ಹಾರನಕಣಿವೆಯ ಸಮೀಪ ನಿರ್ಮಿಸಲಾಗಿರುವ ಕೋಡಿಯಲ್ಲಿ ಇದೇ ಮೊದಲ ಬಾರಿಗೆ ನೀರು ಹರಿಯಲಿದೆ.

ಗಂಗಾಪೂಜೆಗೆ ಪೈಪೋಟಿ: ವಾಣಿವಿಲಾಸಕ್ಕೆ ಜಲಾಶಯಕ್ಕೆ ಗಂಗಾಪೂಜೆ ಮಾಡಿದವರಲ್ಲಿ ಮೊದಲಿಗರಾಗಬೇಕು ಎಂದು ಕೆಲವು ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಹೋದರು. ಸ್ಥಳದಲ್ಲಿದ್ದ ಪೊಲೀಸರು, ನೀರಾವರಿ ನಿಗಮದ ಅಧಿಕಾರಿಗಳು ಪೂಜೆಗೆ ಅವಕಾಶ ಕೊಡದೆ ಅವರನ್ನು ಹಿಂದಕ್ಕೆ ಕಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.