ಚಿತ್ರದುರ್ಗ: ಭೂಪರಿವರ್ತನೆಯಾಗದ ಹಿಡುವಳಿಯಲ್ಲಿ ಬಡವಾಣೆ ನಿರ್ಮಾಣಕ್ಕೆ ಅನುಮತಿ ನೀಡಿ ಸರ್ಕಾರಕ್ಕೆ ರಾಜಧನ ವಂಚನೆ ಮಾಡಿದ ಇಬ್ಬರು ಸರ್ಕಾರಿ ನೌಕರರಿಗೆ 3 ವರ್ಷ ಜೈಲು ಹಾಗೂ ₹ 20 ಸಾವಿರ ದಂಡ ವಿಧಿಸಿ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ.
ಮೆದೆಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿದ್ದ ಸಿ.ಎನ್.ಪಂಪಾಪತಿ ಹಾಗೂ ತಾಲ್ಲೂಕು ಕಚೇರಿಯ ಭೂಮಾಪಕನಾಗಿದ್ದ ಗಂಗಾಧರಯ್ಯ ಶಿಕ್ಷೆಗೆ ಗುರಿಯಾದವರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಂಕರಪ್ಪ ಮಲ್ಲಾಶೆಟ್ಟಿ ಆದೇಶ ನೀಡಿದ್ದಾರೆ.
ಕೆಳಗೋಟೆ ಗ್ರಾಮದ ಸರ್ವೆ ನಂಬರ್ 32/01ರಲ್ಲಿರುವ 2 ಎಕರೆ 8 ಗುಂಟೆ ಜಮೀನನ್ನು ಭೂಪರಿವರ್ತನೆ ಮಾಡದೇ ಬಡಾವಣೆ ರೂಪಿಸಲು ಪಂಪಾಪತಿ ಅವಕಾಶ ಮಾಡಿಕೊಟ್ಟಿದ್ದರು. ಸರ್ವೆಗೆ ತೆರಳಿದ ಗುತ್ತಿಗೆ ನೌಕರ ಗಂಗಾಧರಯ್ಯ ಕೂಡ ವಾಸ್ತವ ಮರೆಮಾಚಿದ್ದರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಹಾಯಕ ಸರ್ಕಾರಿ ಅಭಿಯೋಜಕಿ ಎಂ.ರೂಪಾ ಸರ್ಕಾರದ ಪರ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.