ನಾಯಕನಹಟ್ಟಿ: ಸಮೀಪದ ಎನ್.ದೇವರಹಳ್ಳಿ ಗ್ರಾಮದ ಚಂದ್ರನಾಯ್ಕ ಎಂಬುವರ ಜಮೀನಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಗಾಂಜಾ ಬೆಳೆ ಪತ್ತೆ ಮಾಡಿದ್ದು, 45 ಕೆ.ಜಿ. ಹಸಿ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ.
ಗಾಂಜಾ ಬೆಳೆದಿದ್ದ ಆರೋಪಿಗಳ ಪೈಕಿ ರಾಜಾನಾಯ್ಕ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಚಂದ್ರನಾಯ್ಕ್ ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಕೆ.ವಿ.ಶ್ರೀಧರ್ ನೇತೃತ್ವದ ಪೊಲೀಸರ ತಂಡ ವರವು ರಸ್ತೆಯ ಜಮೀನಿನಲ್ಲಿ ಗುರುವಾರ ಕಾರ್ಯಾಚರಣೆ ನಡೆಸಿತು. ಟೊಮೆಟೊ, ಚಂಡುಹೂವು ಹಾಗೂ ಮೆಣಸಿನಕಾಯಿ ಬೆಳೆಯ ನಡುವೆ ಗಾಂಜಾ ಬೆಳೆದಿರುವುದನ್ನು ಪತ್ತೆ ಮಾಡಿತು.
ಗಾಂಜಾ ಗಿಡಗಳನ್ನು ಕಿತ್ತು ತೂಕ ಹಾಕಲಾಯಿತು. 45 ಕೆ.ಜಿ. ಹಸಿ ಗಾಂಜಾ ಇರುವುದನ್ನು ದೃಢಪಡಿಸಿತು. ತಂಡದಲ್ಲಿ ಮೊಳಕಾಲ್ಮುರು ಸಿಪಿಐ ಜಿ.ಬಿ. ಉಮೇಶ್, ಪಿಎಸ್ಐ ಎಸ್. ರಘುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.