
ಚಿತ್ರದುರ್ಗ: ಫುಡ್ಕೋರ್ಟ್ (ಆಹಾರ ಮಳಿಗೆ) ನೆಪದಲ್ಲಿ ನಗರಸಭೆ ನಗರದ ನಾಲ್ಕು ಕಡೆ ಅವೈಜ್ಞಾನಿಕ ರೀತಿಯಲ್ಲಿ ಮಳಿಗೆ ನಿರ್ಮಾಣ ಮಾಡುತ್ತಿರುವುದು ಸಾರ್ವಜನಿಕರ ಆಕ್ರೊಶಕ್ಕೆ ಕಾರಣವಾಗಿದೆ. ಯಾವುದೇ ಮೂಲ ಸೌಲಭ್ಯ ಒದಗಿಸದೇ ರಸ್ತೆ ಬದಿಯಲ್ಲಿ ಅಂಗಡಿ ಕಟ್ಟುತ್ತಿರುವುದು ಅನುಮಾನ ಮೂಡಿಸಿದೆ.
ಶಾಲೆ, ಕಾಲೇಜುಗಳ ಹೊರವಲಯ, ಮಾರುಕಟ್ಟೆ, ಬಸ್ ನಿಲ್ದಾಣ ಭಾಗದ ಫುಟ್ಪಾತ್ಗಳಲ್ಲಿ ಬೀದಿಬದಿ ವ್ಯಾಪಾರಿಗಳು ಅಂಗಡಿ ಹಾಕುವುದು ಸಾಮಾನ್ಯ. ಇದೇ ಕೆಲಸವನ್ನು ನಗರಸಭೆ ಮಾಡಿದರೆ ಹೇಗೆ? ಹೌದು, ನಗರಸಭೆ ಇಂಥದ್ದೇ ಕೆಲಸ ಮಾಡುತ್ತಾ ಜನರ ಆಕ್ರೋಶಕ್ಕೆ ತುತ್ತಾಗಿದೆ. ಸದಾ ಟ್ರಾಫಿಕ್ ಜಾಮ್ ಆಗಿ ಜನರಿಗೆ ತೊಂದರೆಯಾಗುವ ಸ್ಥಳದಲ್ಲೇ ಮಳಿಗೆ ನಿರ್ಮಿಸಲಾಗುತ್ತಿದೆ. ಇದಕ್ಕೆ ನಗರಸಭೆ ಅಧಿಕಾರಿಗಳು ‘ಫುಡ್ಕೋರ್ಟ್’ ನೆಪ ಹೇಳುತ್ತಿರುವುದು ಗೊಂದಲ ಮೂಡಿಸಿದೆ.
ಆರ್ಟಿಒ ಕಚೇರಿ, ಆಸ್ಪತ್ರೆ ರಸ್ತೆ, ಸ್ಟೇಡಿಯಂ ರಸ್ತೆ, ಹೊಳಲ್ಕೆರೆ ರಸ್ತೆಗಳಲ್ಲಿ ತಲಾ 4 ಮಳಿಗೆಯಂತೆ 16 ಮಳಿಗೆ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ₹ 30 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಶೀಘ್ರ ಕಾಮಗಾರಿಯೂ ಪೂರ್ಣಗೊಳ್ಳಲಿದ್ದು, ವರ್ತಕರಿಗೆ ಬಾಡಿಗೆ ನೀಡುವ ಪ್ರಕ್ರಿಯೆಯೂ ಆರಂಭವಾಗಲಿದೆ.
ಜಿಲ್ಲಾ ಕ್ರೀಡಾಂಗಣ ರಸ್ತೆಯ ಆರಂಭದಲ್ಲೇ ನಗರಸಭೆ 3 ಮಳಿಗೆ ನಿರ್ಮಾಣ ಮಾಡಿದೆ. ಮಳಿಗೆಗಳು ಮುಖ್ಯ ರಸ್ತೆಗೆ ಹೊಂದಿಕೊಂಡಂತಿದ್ದು, ಆಹಾರ ಸೇವನೆಗೆ ಸಣ್ಣ ಜಾಗವೂ ಇಲ್ಲದಾಗಿದೆ. ಬಿ.ಡಿ. ರಸ್ತೆ, ಸ್ಟೇಡಿಯಂ ರಸ್ತೆ ಸೇರಿ ಮೂರು ರಸ್ತೆಗಳು ಕೂಡುವ ಸರ್ಕಲ್ ಇದಾಗಿದ್ದು, ಸದಾ ಟ್ರಾಫಿಕ್ ತೀವ್ರವಾಗಿರುತ್ತದೆ. ರಸ್ತೆ ಆರಂಭದಲ್ಲಿ ದ್ವಿಪಥ ಆರಂಭಗೊಳ್ಳುವ ಕಾರಣ ಕಿರಿದಾದ ದಾರಿಯಲ್ಲಿ ಜನರು ಓಡಾಡಲು ಕಷ್ಟಪಡುತ್ತಾರೆ.
ಇದೇ ಜಾಗದಲ್ಲಿ ಮಳಿಗೆ ನಿರ್ಮಾಣವಾಗಿದ್ದು, ಟ್ರಾಫಿಕ್ ಜಾಮ್ ಇನ್ನಷ್ಟು ಹೆಚ್ಚಳವಾಗಲಿದೆ ಎಂಬ ಆತಂಕ ಈ ಭಾಗದ ಜನರಲ್ಲಿದೆ. ಗ್ರಾಹಕರ ವಾಹನ ನಿಲುಗಡೆಗೂ ಜಾಗವಿಲ್ಲ. ಹೀಗಾಗಿ ಯಾವ ಮಾನದಂಡದಲ್ಲಿ ನಗರಸಭೆ ಬೀದಿಬದಿಯಲ್ಲಿ ಮಳಿಗೆ ನಿರ್ಮಿಸುತ್ತಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
‘ಫುಡ್ಕೋರ್ಟ್ ನಿರ್ಮಾಣಕ್ಕೆ ವಿಸ್ತ್ರುತವಾದ ಯೋಜನೆಯ ಅವಶ್ಯಕತೆ ಇದೆ. ಟ್ರಾಫಿಕ್ ಸಮಸ್ಯೆಯಿಲ್ಲದ ವಿಶಾಲ ಜಾಗದಲ್ಲಿ ಹೈಟೆಕ್ ಮಾದರಿಯಲ್ಲಿ ಫುಡ್ಕೋರ್ಟ್ ನಿರ್ಮಿಸಿರುವುದನ್ನು ಕಂಡಿದ್ದೇವೆ. ಆದರೆ, ಯಾವ ಯೋಜನೆಯೂ ಇಲ್ಲದೇ ಬೀದಿಬದಿ ವ್ಯಾಪಾರಿಗಳಂತೆ ಕಳಪೆ ಗುಣಮಟ್ಟದ ಮಳಿಗೆ ನಿರ್ಮಿಸುತ್ತಿರುವುದು ಯಾವ ಪುರುಷಾರ್ಥಕ್ಕೆ’ ಎಂದು ಸ್ಟೇಡಿಯಂ ರಸ್ತೆಯ ನಿವಾಸಿ ಎಸ್.ಮಹಾಂತೇಶ್ ಪ್ರಶ್ನಿಸಿದರು.
ಇನ್ನುಳಿದ ಮೂರು ಕಡೆಗಳಲ್ಲೂ ರಸ್ತೆಗೆ ಹೊಂದಿಕೊಂಡಂತೇ ಮಳಿಗೆ ನಿರ್ಮಾಣ ಮಾಡುತ್ತಿರುವುದನ್ನು ಸ್ಥಳೀಯರು ವಿರೋಧಿಸಿದ್ದಾರೆ.
ಕಾಲೇಜು ಕಾಂಪೌಂಡ್ ಧ್ವಂಸ: ಸ್ಟೇಡಿಯಂ ರಸ್ತೆಯಲ್ಲಿ ಐತಿಹಾಸಿಕ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕಾಂಪೌಂಡ್ ಧ್ವಂಸ ಮಾಡಿ ಮಳಿಗೆ ನಿರ್ಮಾಣ ಮಾಡಿರುವುದು ಕಾಲೇಜು ಸಿಬ್ಬಂದಿಯ ಆಕ್ರೋಶಕ್ಕೆ ಗುರಿಯಾಗಿದೆ. 3 ಮಳಿಗೆಯಷ್ಟು ಗೋಡೆಯನ್ನು ಒಡೆದು ಅದಕ್ಕೆ ಹೊಂದಿಕೊಂಡಂತೆ ಮಳಿಗೆಯ ಹಿಂಭಾಗದ ಗೋಡೆ ನಿರ್ಮಾಣ ಮಾಡಲಾಗಿದೆ.
ಈ ಕುರಿತು ಕಾಲೇಜು ಪ್ರಾಂಶುಪಾಲರಾದ ಎನ್.ದೊಡ್ಡಯ್ಯ ಅವರು ನಗರಸಭೆ ಪೌರಾಯುಕ್ತರು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ದೂರು ನೀಡಿದ್ದಾರೆ. ಕೂಡಲೇ ಕಾಂಪೌಂಡ್ ಗೋಡೆಯನ್ನು ಮರು ನಿರ್ಮಾಣ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
‘ನಮ್ಮ ಮನವಿ ಮೇರೆಗೆ ನಗರಸಭೆ ಪೌರಾಯುಕ್ತರಾದ ಎಸ್.ಲಕ್ಷ್ಮಿ ಅವರು ಸ್ಥಳಕ್ಕೆ ಬಂದಿದ್ದರು. ನಗರಸಭೆ ವತಿಯಿಂದಲೇ ಮಳಿಗೆ ನಿರ್ಮಾಣ ಮಾಡಲಾಗುತ್ತಿದ್ದು ಕಾಲೇಜಿಗೆ ಯಾವುದೇ ತೊಂದರೆಯಾಗುವುದಿಲ್ಲ ಅವರು ಹಾರಿಕೆ ಉತ್ತರ ಕೊಟ್ಟಿದ್ದಾರೆ. ಅವರ ವಿರುದ್ಧ ಜಿಲ್ಲಾಧಿಕಾರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿಗೂ ದೂರು ನೀಡಲಾಗುವುದು’ ಎಂದು ದೊಡ್ಡಯ್ಯ ತಿಳಿಸಿದರು.
ಮಳಿಗೆ ಬಾಡಿಗೆ ವಸೂಲಿ ವೈಫಲ್ಯ
‘ನಗರದ ವಿವಿಧೆಡೆ ನಗರಸಭೆ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚು ಮಳಿಗೆಗಳಿದ್ದು ಅವುಗಳನ್ನು ನಿಯಮಾನುಸಾರ ಹರಾಜು ಹಾಕಿ ಬಾಡಿಗೆ ನೀಡಿಲ್ಲ. ಬಹುತೇಕ ಮಳಿಗೆಗಳ ಬಾಡಿಗೆ ವಸೂಲಿ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಹಲವು ಪ್ರಭಾವಿಗಳು ತಮ್ಮ ಸ್ವಂತ ಮಳಿಗೆ ಎಂಬಂತೆ ಬೇಕಾದವರಿಗೆ ಬಾಡಿಗೆ ಕೊಟ್ಟಿದ್ದಾರೆ. ಈಗ ಏಕಾಏಕಿ ರಸ್ತೆ ಬದಿಯಲ್ಲಿ ಮಳಿಗೆ ನಿರ್ಮಿಸುತ್ತಿರುವುದು ಸರಿಯಲ್ಲ’ ಎಂದು ನಗರಸಭೆ ಮಾಜಿ ಸದಸ್ಯರೊಬ್ಬರು ಆರೋಪಿಸಿದರು. ‘ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶ ಮಾಡಿ ಮಳಿಗೆ ನಿರ್ಮಾಣ ಕಾಮಗಾರಿ ತಡೆಯಬೇಕು. ನಗರಸಭೆ ಹಣ ಅನಾವಶ್ಯಕವಾಗಿ ಖರ್ಚಾಗದಂತೆ ಕ್ರಮ ವಹಿಸಬೇಕು’ ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.