
ಹೊಳಲ್ಕೆರೆ: ಕೊಳಾಳು ಕೆಂಚಾವಧೂತರ ಗದ್ದುಗೆ ಹಾಗೂ ದೇವಸ್ಥಾನ ನಿರ್ಮಾಣಕ್ಕೆ ₹ 50 ಲಕ್ಷ ಅನುದಾನ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭರವಸೆ ನೀಡಿದರು.
ತಾಲ್ಲೂಕಿನ ಕೊಳಾಳು ಗ್ರಾಮದಲ್ಲಿ ಭಾನುವಾರ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕೆಂಚಾವಧೂತರು ಪವಾಡ ಪುರುಷರಾಗಿದ್ದು, ಲಕ್ಷಾಂತರ ಭಕ್ತರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಗ್ರಾಮಸ್ಥರು ಪ್ರಾಚೀನ ಕಾಲದ ದೇವಸ್ಥಾನದ ಮೂಲವನ್ನು ಉಳಿಸುವ ಮೂಲಕ ಹೊಸ ದೇವಸ್ಥಾನ ನಿರ್ಮಿಸಲು ಮುಂದಾಗಿದ್ದಾರೆ. ದೇವಸ್ಥಾನ ನಿರ್ಮಾಣಕ್ಕೆ ₹ 4 ಕೋಟಿ ವೆಚ್ಚವಾಗಬಹುದು ಎಂದು ಗ್ರಾಮಸ್ಥರು ತಿಳಿಸಿದ್ದು, ಅಗತ್ಯ ಬಿದ್ದರೆ ಇನ್ನೂ ಹೆಚ್ಚು ಅನುದಾನ ನೀಡುತ್ತೇನೆ ಎಂದರು.
ಶಾಸಕ ಎಂ. ಚಂದ್ರಪ್ಪ ದೇವಾಲಯ ನಿರ್ಮಾಣಕ್ಕೆ ₹ 20 ಲಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ₹ 10 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಶನಿವಾರ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5ರ ವರೆಗೆ 71 ಜನ ಮಠದ ಆವರಣದಲ್ಲಿ ಸಾಮೂಹಿಕ ದೇವಿ ಪಾರಾಯಣ ಪಠಿಸಿದರು.
ಚಿತ್ರದುರ್ಗದ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಶಿವಮೊಗ್ಗದ ದುರ್ಗಾ ಸಪ್ತಶತಿ ಋಷಿಪ್ರಜ್ಞಾ ಆಂದೋಲನ ಮಠದ ನರೇಂದ್ರ ಕುಮಾರ್ ಸ್ವಾಮೀಜಿ, ಚಳ್ಳಕೆರೆಯ ನರಹರಿ ಸದ್ಗುರು ಆಶ್ರಮದ ರಾಜಾರಾಮ ಶಾಸ್ತ್ರಿ, ಹುಬ್ಬಳ್ಳಿಯ ಸಿದ್ಧಾರೂಢ ಮಠದ ಧರ್ಮದರ್ಶಿ ಶಮಾನಂದ ಬಾಳಪ್ಪ ಪೂಜಾರಿ, ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಜಿ.ಪಿ. ಕೆಂಚಪ್ಪ, ಡಿ.ಕೆ. ಶಿವಮೂರ್ತಿ, ಕಿರಣ್ ಕುಮಾರ್, ಎ.ಜಯಪ್ಪ, ಗಣಿತ ಶಾಸ್ತ್ರಜ್ಞ ಗಿರೀಶ್, ತಿಪ್ಪೀರಯ್ಯ, ವದ್ದಿಕೆರೆ ಕಾಂತರಾಜ್, ದೇವರಾಜ್, ಕೋವೇರಹಟ್ಟಿ ತಿಪ್ಪೇಸ್ವಾಮಿ, ಕೆಂಚಪ್ಪ, ಎಂ.ಡಿ. ಕೋಟೆ ಚಂದ್ರಪ್ಪ, ಜೆಡಿಎಸ್ ಮುಖಂಡ ಜಯಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ದ್ಯಾಮೇಗೌಡ, ನಿವೃತ್ತ ಪ್ರಾಚಾರ್ಯ ಜಿ.ಪಿ. ಕೆಂಚಪ್ಪ ಹಾಗೂ ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.