
ಹಿರಿಯೂರು: ತಾಲ್ಲೂಕಿನ ಗಾಂಧಿನಗರ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಎರಡು ವರ್ಷದ ಮೇಲಾಗಿದ್ದು, ಘಟಕವನ್ನು ತಕ್ಷಣ ದುರಸ್ತಿ ಮಾಡಿಸದಿದ್ದರೆ ಗ್ರಾಮಸ್ಥರೆಲ್ಲ ಒಟ್ಟಾಗಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಗ್ರಾಮದ ಮುಖಂಡರಾದ ಕೆ. ಓಬಳೇಶ್, ಎಸ್. ಹನುಮಂತಪ್ಪ, ಎಸ್. ಲಿಂಗಪ್ಪ, ಜಿ. ಆಂಜನೇಯ, ನಾಗಾರ್ಜುನ ಹಾಗೂ ನರಸಿಂಹಯ್ಯ ಎಚ್ಚರಿಸಿದ್ದಾರೆ.
ಆರ್ಒ ಘಟಕ ಕೆಟ್ಟು ಹೋಗಿರುವ ಕಾರಣ, ಕುಡಿಯುವ ನೀರನ್ನು 2 ಕಿ.ಮೀ. ದೂರದಲ್ಲಿರುವ ಪಂಚಾಯಿತಿ ಮುಖ್ಯ ಕೇಂದ್ರ ಗೌಡನಹಳ್ಳಿಯಿಂದ ತರಬೇಕಿದೆ. ಪಿಡಿಒ ಹಾಗೂ ಮತಯಾಚನೆಗೆ ಬಂದಿದ್ದ ಜನಪ್ರತಿನಿಧಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದ್ದರೂ ಪರಯೋಜನವಾಗಿಲ್ಲ. ಹೊರನೋಟಕ್ಕೆ ಸುಂದರವಾಗಿ ಕಾಣುತ್ತಿರುವ ಘಟಕವನ್ನು ಅಕ್ಕಪಕ್ಕದ ಮನೆಯವರು ಬಟ್ಟೆ ಒಣಗಿಸಲು ಬಳಸುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ.
‘ಒಂದು ಕಡೆ ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳಿ ಎಂದು ಪ್ರಚಾರ ಮಾಡುವ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಆರೋಗ್ಯ ಸುರಕ್ಷತೆಗೆ ಪ್ರಮುಖವಾಗಿ ಬೇಕಿರುವ ಶುದ್ಧ ನೀರನ್ನು ಕೊಡುವಲ್ಲಿ ವಿಫಲರಾಗಿದ್ದಾರೆ. ಊರಿನ ಎಲ್ಲಾ ಸಮಸ್ಯೆಗಳಿಗೆ ಹೋರಾಟ ಮಾಡಿಯೇ ಪರಿಹಾರ ಪಡೆಯಬೇಕೆ?’ ಎಂದು ಪ್ರಶ್ನಿಸಿದ ಗ್ರಾಮಸ್ಥರು, ‘ಜಿಲ್ಲಾ ಉಸ್ತುವಾರಿ ಸಚಿವರು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಗ್ರಾಮದ ಜನರಿಗೆ ಶುದ್ಧ ನೀರು ಕೊಡಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.