ಹೊಳಲ್ಕೆರೆ: ಪಟ್ಟಣದ ಚೀರನಹಳ್ಳಿ ರಸ್ತೆಯಲ್ಲಿರುವ ಹಳ್ಳದ ವೀರಭದ್ರಸ್ವಾಮಿ ದೇವಾಲಯಕ್ಕೆ ಭದ್ರತೆ ಒದಗಿಸಬೇಕು ಎಂದು ಕೋಟೆ ಪ್ರದೇಶದ ನಿವಾಸಿಗಳು ಪಿಎಸ್ಐ ಸಚಿನ್ ಪಾಟೀಲ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಶುಕ್ರವಾರ ರಾತ್ರಿ ಹಳ್ಳದ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಬಾಗಿಲು ಮುರಿದು ಹುಂಡಿ ಕಳವು ಮಾಡಲಾಗಿದೆ. ಪ್ರಧಾನ ಅರ್ಚಕ ವಿನಯಸ್ವಾಮಿ ಶನಿವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಪೂಜೆ ಮಾಡಲು ಹೋದಾಗ ಹುಂಡಿ ಕಳವಾದ ಪ್ರಕರಣ ಬೆಳಕಿಗೆ ಬಂದಿದೆ.
ದೇವಸ್ಥಾನ ಪಟ್ಟಣದ ಹೊರವಲಯದಲ್ಲಿ ಇರುವುದರಿಂದ ರಾತ್ರಿ ವೇಳೆ ಪುಂಡರು ಮದ್ಯಪಾನ ಮಾಡಿ ಖಾಲಿ ಬಾಟಲಿ ಎಸೆಯುತ್ತಿದ್ದಾರೆ. ದೇವಸ್ಥಾನದ ಬಳಿಯ ರಂಗನಾಥಸ್ವಾಮಿ ಪ್ರೌಢಶಾಲಾ ಆವರಣ ಹಾಗೂ ಚೀರನಹಳ್ಳಿ ರಸ್ತೆಯನ್ನು ಕುಡುಕರು ತಮ್ಮ ಅಡ್ಡ ಮಾಡಿಕೊಂಡಿದ್ದಾರೆ. ಪಕ್ಕದಲ್ಲೇ ಇರುವ ಗಣಪತಿ ಕಲ್ಯಾಣ ಮಂಟಪದಲ್ಲಿ ಮದುವೆಗಳು ನಡೆಯುವಾಗ ಮದುವೆಗೆ ಬಂದವರು ಸದ್ಗುರು ಆಶ್ರಮದಿಂದ ಹಳ್ಳದ ವೀರಭದ್ರಸ್ವಾಮಿ ದೇವಸ್ಥಾನದವರೆಗೆ ಮದ್ಯಪಾನ ಮಾಡುತ್ತಾರೆ. ಇದರಿಂದ ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸಲು ಭಯವಾಗುತ್ತದೆ. ರಾತ್ರಿ ವೇಳೆ ಬೀಟ್ ಪೊಲೀಸರನ್ನು ನಿಯೋಜಿಸಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ಸಿದ್ದರಾಮಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್. ಅಜಯ್, ಶಿವಮೂರ್ತಿ, ದುಕ್ಕಡ್ಲೆ ರವಿ, ಲೋಕಪ್ಪ, ದೇವಸ್ಥಾನ ಸಮಿತಿಯ ಮುರುಗೇಶ್, ತಿಮ್ಮಪ್ಪ, ಅರ್ಚಕ ವಿನಯ್, ನಾಗರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.