
ಚಿತ್ರದುರ್ಗ: ದೇವರಾಜ ಅರಸು ಶಿಕ್ಷಣ ಸಂಸ್ಥೆಯಿಂದ ನಡೆಯುವ ಆಕರ್ಷಕ ‘ಡೆಸ್ಟಿನಿ– 2026’ಕ್ಕೆ ಜ. 10ರಂದು ಚಾಲನೆ ದೊರೆಯಲಿದ್ದು, ನಾಲ್ಕು ದಿನಗಳ ಕಾಲ ವೈಭವಯುತವಾದ ಸಾಂಸ್ಕೃತಿಕ ಹಬ್ಬ ನಡೆಯಲಿದೆ.
ಶನಿವಾರ ಸಂಜೆ 5 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಂಸ್ಥೆಯ ಸ್ಥಾಪಕ, ಶಾಸಕ ಎಂ. ಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಲಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಚ್.ಚಂದ್ರಕಲಾ, ಸಂಸ್ಥೆಯ ಅಧ್ಯಕ್ಷರಾದ ಎಂ.ಸಿ.ಯಶಸ್ವಿನಿ, ಸಿಇಒ ಎಂ.ಸಿ.ರಘುಚಂದನ್, ಡಿಡಿಪಿಐ ಎಂ.ಆರ್.ಮಂಜುನಾಥ್, ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಿ.ಎಂ.ಗಿರೀಶ್ ಭಾಗವಹಿಸುವರು.
ಉದ್ಘಾಟನಾ ಸಮಾರಂಭದ ನಂತರ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಅದೇ ದಿನ ಸಂಜೆ ಡೀಪ್ ಬ್ಯಾಂಡ್ಸ್ ಅವರಿಂದ ವಾದ್ಯ ಸಂಗೀತ, ಕಾಮಿಡಿ ಕಿಲಾಡಿಗಳು ತಂಡದಿಂದ ಸ್ಟ್ಯಾಂಡ್-ಅಪ್ ಕಾಮಿಡಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಜ. 11ರಂದು ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರ ತಂಡದಿಂದ ಸಂಗೀತ ರಸದೌತಣವಿದೆ. ಜ. 12ರಂದು ಕನ್ನಡ ರ್ಯಾಪರ್ ಎಂ.ಸಿ.ಬಿಜ್ಜು ಅವರಿಂದ ರ್ಯಾಪ್ ರಿಟ್ರೀಟ್ ಆಯೋಜಿಸಲಾಗಿದೆ. ಜ. 13ರಂದು ಗಾಯಕಿ ದಿವ್ಯಾ ರಾಮಚಂದ್ರ ಅವರ ತಂಡದಿಂದ ಸಂಗೀತ ಕಾರ್ಯಕ್ರಮವಿದೆ. ಈ ಸಂಗೀತ ಕಾರ್ಯಕ್ರಮದ ನಂತರ ಪ್ರೇಕ್ಷಕರ ಮನರಂಜನೆಗಾಗಿ ಡಿಜೆ ಕಾರ್ಯಕ್ರಮ ಆಯೋಜಿಸಲಾಗಿದೆ.
ನಾಲ್ಕು ದಿನಗಳ ಕಾಲ ನಡೆಯುವ ಡೆಸ್ಟಿನಿ ಕಾರ್ಯಕ್ರಮವು ಕೆ.ಜಿ.ಯಿಂದ ಪದವಿ ಮಟ್ಟದವರೆಗಿನ ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಹಾಗೂ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆಯಾಗಲಿದೆ ಎಂದು ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.