ADVERTISEMENT

ಚಿತ್ರದುರ್ಗ | ‘ರೈತರ ಭೂಮಿ ಸ್ವಾಧೀನಪಡಿಸಲು ಬಿಡಲ್ಲ’

ಸಂಯುಕ್ತ ಹೋರಾಟದಿಂದ ನಾಳೆ ದೇವನಹಳ್ಳಿ ಚಲೋ: ಜಿಲ್ಲಾ ಘಟಕದ ಅಧ್ಯಕ್ಷ ಜೆ.ಯಾದವರೆಡ್ಡಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 14:30 IST
Last Updated 23 ಜೂನ್ 2025, 14:30 IST
ಚಿತ್ರದುರ್ಗದ ಪ್ರವಾಸಿಮಂದಿರದಲ್ಲಿ ಸೋಮವಾರ ದೇವನಹಳ್ಳಿ ಚಲೋ ಪೋಸ್ಟರ್‌ ಅನ್ನು ಸಂಯುಕ್ತ ಕಿಸಾನ್‌ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಯಾದವರೆಡ್ಡಿ ಬಿಡುಗಡೆ ಮಾಡಿದರು
ಚಿತ್ರದುರ್ಗದ ಪ್ರವಾಸಿಮಂದಿರದಲ್ಲಿ ಸೋಮವಾರ ದೇವನಹಳ್ಳಿ ಚಲೋ ಪೋಸ್ಟರ್‌ ಅನ್ನು ಸಂಯುಕ್ತ ಕಿಸಾನ್‌ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಯಾದವರೆಡ್ಡಿ ಬಿಡುಗಡೆ ಮಾಡಿದರು   

ಚಿತ್ರದುರ್ಗ: ‘ರೈತರ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಜೂ.25 ರಂದು ಸಂಯುಕ್ತ ಹೋರಾಟ ಕರೆ ನೀಡಿರುವ ದೇವನಹಳ್ಳಿ ಚಲೋಗೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳಬೇಕು’ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಯಾದವರೆಡ್ಡಿ ಮನವಿ ಮಾಡಿದರು.

‘ದೇವನಹಳ್ಳಿ ಸುತ್ತಲಿನ 1,777 ಎಕರೆ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ಕಾರ್ಪೊರೇಟ್‌ ಕಂಪನಿಗಳಿಗೆ ನೀಡಲು ಮುಂದಾಗಿದೆ. ಈ ಕ್ರಮ ಖಂಡಿಸಿ ದೇವನಹಳ್ಳಿ ತಾಲ್ಲೂಕು ಕಚೇರಿ ಮುಂಭಾಗ ನಡೆಯಲಿರುವ ಹೋರಾಟಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ರೈತರು ತೆರಳುತ್ತಿದ್ದಾರೆ. ಅದಕ್ಕಾಗಿ ಜಿಲ್ಲೆಯಿಂದ ರೈತರು, ಕಾರ್ಮಿಕರು, ಮಹಿಳೆಯರು, ಜನಪರ ಹೋರಾಟಗಾರರು ಭಾಗವಹಿಸಿ ನೈತಿಕ ಸ್ಥೈರ್ಯ ತುಂಬಬೇಕಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರೈತರ ಭೂ ಹೋರಾಟ ಈಗಾಗಲೇ 1180 ದಿನಕ್ಕೆ ಕಾಲಿಟ್ಟಿದೆ. ಮೂರು ವರ್ಷದ ಕೆಳಗೆ ಭೂಮಿ ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ಆದೇಶಿಸಿದಾಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಭೂಮಿ ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ, ರೈತರ ಪರವಾಗಿರುತ್ತೇನೆಂದು ಹೇಳಿದ್ದರು. ಆದರೆ, ಈಗ ವಚನ ಭ್ರಷ್ಟರಾಗಿರುವುದಲ್ಲದೆ ರೈತರಿಗೆ ನೋಟಿಸ್‌ ಕೊಟ್ಟು ಅಂಕಿತ ಹಾಕಲು ಮುಂದಾಗಿದ್ದಾರೆ’ ಎಂದು ಕಿಡಿಕಾರಿದರು.

ADVERTISEMENT

‘ಒಂದರೆಡು ಎಕರೆ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬದುಕುತ್ತಿರುವ ರೈತರು ಬೀದಿಗೆ ಬೀಳುವ ಆತಂಕದಲ್ಲಿದ್ದಾರೆ. ಭೂಮಿಯನ್ನು ವಶಪಡಿಸಿಕೊಂಡಾಗ ಪಾಲುದಾರಿಕೆ ಮತ್ತು ಮನೆಗೊಂದು ಉದ್ಯೋಗ ಕೊಡಬೇಕೆಂಬ ನಿಯಮವಿದೆ. ಆದರೆ ರಾಜ್ಯ ಸರ್ಕಾರ ಎಲ್ಲವನ್ನು ಧಿಕ್ಕರಿಸಿ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿದೆ. ಇದರ ವಿರುದ್ಧ ಹೋರಾಟ ನಿರಂತರವಾಗಿರುತ್ತದೆ’ ಎಂದು ಎಚ್ಚರಿಸಿದರು.

‘ಅನಾದಿ ಕಾಲದಿಂದಲೂ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಜೀವಿಸುತ್ತಿರುವ ರೈತರಿಗೆ ಹಕ್ಕುಪತ್ರ ನೀಡಬೇಕೆ ವಿನಃ ಅಲ್ಪಸ್ವಲ್ಪ ತುಂಡು ಭೂಮಿಯನ್ನು ಕಸಿದುಕೊಳ್ಳುವುದು ಯಾವ ನ್ಯಾಯ? ನ್ಯಾಯಾಲಯ ಮಧ್ಯ ಪ್ರವೇಶಿಸಿ ರೈತರ ಭೂಮಿ ವಶಪಡಿಸಿಕೊಳ್ಳುವುದಕ್ಕೆ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

‘ಎಚ್‌.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 2014ರ ಭೂ–ಕಾಯ್ದೆಗೆ ತಿದ್ದುಪಡಿ ತಂದು ಬೆಲೆ ನಿಗದಿಪಡಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಿದ್ದನ್ನು ರದ್ದುಪಡಿಸಬೇಕು. ಬಲವಂತವಾಗಿ ರೈತರ ಜಮೀನು ಕಸಿದುಕೊಂಡು ದರ್ಪ ದೌರ್ಜನ್ಯ ಎಸಗುವುದನ್ನು ನಿಲ್ಲಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಒತ್ತಾಯಿಸಿದರು.

‘ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆವರೆಗೂ ರೈತರ ಭೂಮಿಯನ್ನು ಪರಭಾರೆ ಮಾಡುವ ವ್ಯವಸ್ಥೆ ಅನ್ನದಾತನ ಜನ್ಮಸಿದ್ಧ ಹಕ್ಕನ್ನು ಕಸಿದಿದೆ. ಸಾರ್ವಜನಿಕ ಉದ್ದೇಶ ಮುಂದಿಟ್ಟು ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳುವುದು ನಿಲ್ಲಬೇಕು. ಇಲ್ಲದಿದ್ದರೆ ರೈತರ ಬದುಕು ದಿವಾಳಿಯಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗಾಂಧಿ ಕಂಡ ಗ್ರಾಮ ಸ್ವರಾಜ್ಯ ಕನಸನ್ನು ಮುಂದಿನ ದಿನಗಳಲ್ಲಿ ನನಸು ಮಾಡಬೇಕಿದೆ. ರೈತರ ಮೇಲೆ ಖಾಸಗೀಕರಣ ಹೇರುತ್ತಿರುವುದರ ವಿರುದ್ಧ ಭೂಮಿಯ ಹಕ್ಕಿನ ಹೋರಾಟ ನಿಲ್ಲುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡರಾದ ಬಸ್ತಿಹಳ್ಳಿ ಜಿ.ಸುರೇಶ್‌ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಧನಂಜಯ ಹಂಪಯ್ಯನಮಾಳಿಗೆ, ಜನಶಕ್ತಿ ಟಿ.ಶಫಿವುಲ್ಲಾ, ಸಿ.ಕೆ.ಗೌಸ್‌ಪೀರ್‌, ಆರ್‌.ಬಿ.ನಿಜಲಿಂಗಪ್ಪ, ಸತ್ಯಪ್ಪ ಮಲ್ಲಾಪುರ ಇದ್ದರು.

ಅನ್ನದಾತನ ಹಕ್ಕು ಕಸಿದ  ಸರ್ಕಾರಗಳು: ಆರೋಪ 1,777 ಎಕರೆ ಭೂಮಿ ವಶಕ್ಕಾಗಿ ನೋಟಿಸ್ ದುಡಿದು ತಿನ್ನುವ ರೈತರ ಮೇಲೆ ದೌರ್ಜನ್ಯ

ಈಗಾಗಲೇ ಖಾಸಗಿ ಸಂಸ್ಥೆಗೆ 120 ಎಕರೆ ಭೂಮಿಯನ್ನು ಬರೆದುಕೊಟ್ಟಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ಒಂದೇ ದಾರಿಯಲ್ಲಿ ಸಾಗುತ್ತಿವೆ. 40 ವರ್ಷದಿಂದ ಇಂತಹ ಕೆಲಸಗಳು ನಡೆಯುತ್ತಿವೆ 

-ಜೆ.ಯಾದವರೆಡ್ಡಿ ಅಧ್ಯಕ್ಷ ಸಂಯುಕ್ತ ಕಿಸಾನ್‌ ಮೋರ್ಚಾ ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.