ADVERTISEMENT

ಪೋಲಾಗುವ ಭದ್ರಾ ನೀರು ವಿ.ವಿ ಸಾಗರಕ್ಕೆ ಹರಿಸಿ

ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 12:35 IST
Last Updated 3 ಅಕ್ಟೋಬರ್ 2020, 12:35 IST
ತರೀಕೆರೆ ತಾಲ್ಲೂಕು ಬೆಟ್ಟದಾವರಕೆರೆ ಸಮೀಪ ಭದ್ರಾ ಜಲಾಶಯದಿಂದ ವಿ.ವಿ. ಸಾಗರಕ್ಕೆ ಹಳ್ಳದ ಮಾರ್ಗವಾಗಿ ನೀರು ಹರಿಸಲು ಪಂಪ್‌ ಚಾಲನೆ ಮಾಡಿರುವುದನ್ನು ಶಾಂತವೀರ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ ಶನಿವಾರ ವೀಕ್ಷಿಸಿದರು.
ತರೀಕೆರೆ ತಾಲ್ಲೂಕು ಬೆಟ್ಟದಾವರಕೆರೆ ಸಮೀಪ ಭದ್ರಾ ಜಲಾಶಯದಿಂದ ವಿ.ವಿ. ಸಾಗರಕ್ಕೆ ಹಳ್ಳದ ಮಾರ್ಗವಾಗಿ ನೀರು ಹರಿಸಲು ಪಂಪ್‌ ಚಾಲನೆ ಮಾಡಿರುವುದನ್ನು ಶಾಂತವೀರ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ ಶನಿವಾರ ವೀಕ್ಷಿಸಿದರು.   

ಹೊಸದುರ್ಗ: ಭದ್ರಾ ನದಿಯಿಂದ ಪೋಲಾಗಿ ಹರಿದು ಸಮುದ್ರ ಸೇರುತ್ತಿರುವ ನೀರನ್ನು ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿಸಬೇಕು ಎಂದು ಇಲ್ಲಿನ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಒತ್ತಾಯಿಸಿದರು.

ತರೀಕೆರೆ ತಾಲ್ಲೂಕು ಬೆಟ್ಟದಾವರಕೆರೆ ಸಮೀಪ ಭದ್ರಾ ಜಲಾಶಯದಿಂದ ವಿ.ವಿ ಸಾಗರಕ್ಕೆ ಹಳ್ಳದ ಮಾರ್ಗವಾಗಿ ನೀರು ಹರಿಸಲು ಪಂಪ್‌ ಚಾಲನೆ ಮಾಡಿರುವ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದರು.

ಬಯಲು ಸೀಮೆಯ ಚಿತ್ರದುರ್ಗ ಜಿಲ್ಲೆಗೆ ಹತ್ತಾರು ವರ್ಷಗಳಿಂದ ಸರಿಯಾಗಿ ಮಳೆ ಆಗದೇ ಜಲಮೂಲಗಳು ಬತ್ತಿಹೋಗಿವೆ. ಈ ಬಾರಿಯೂ ವೇದಾವತಿ ನದಿ ಪಾತ್ರದಲ್ಲಿ ಮಳೆಯೂ ಕ್ಷೀಣಿಸಿದೆ. ಈ ಭಾಗದಲ್ಲಿ ಅಂತರ್ಜಲವೂ ಕುಸಿತವಾಗಿದ್ದು, ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹೆಚ್ಚು ನೀರು ಹರಿಸಿದಲ್ಲಿ ಬರದ ನಾಡಿನ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

ADVERTISEMENT

ಬೆಟ್ಟದಾವರಕೆರೆ ಬಳಿಯ ಪಂಪ್‌ಹೌಸ್‌ನಲ್ಲಿ ಕೇವಲ ಒಂದು ಪಂಪ್‌ ಚಾಲನೆ ಮಾಡಿರುವುದರಿಂದ ಹೆಬ್ಬೂರು ಹಳ್ಳದ ಮಾರ್ಗವಾಗಿ ವಿ.ವಿ ಸಾಗರಕ್ಕೆ ಕಡಿಮೆ ನೀರು ಹೋಗುತ್ತಿದೆ. ಇಲ್ಲಿರುವ ಎರಡ್ಮೂರು ಪಂಪ್‌ಗಳನ್ನು ಚಾಲನೆ ಮಾಡಲು ಅವಕಾಶವಿದ್ದು, ಚಾಲನೆ ನೀಡಿದಲ್ಲಿ 2,000ಕ್ಕೂ ಹೆಚ್ಚಿನ ಕ್ಯುಸೆಕ್‌‌ ನೀರು ಹರಿಯಲಿದೆ. ಈಗಾಗಲೇ ಭದ್ರಾ ಜಲಾಶಯ ಭರ್ತಿಯಾಗಿದ್ದು, ಪ್ರತಿದಿನ ಐದಾರು ಸಾವಿರ ಕ್ಯುಸೆಕ್‌ ನೀರು ಸಮುದ್ರ ಸೇರುತ್ತಿದೆ. ಹಾಗಾಗಿ ಸಮುದ್ರ ಸೇರುವ ನೀರನ್ನು ಖಾಲಿ ಇರುವ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿಸಲು ಸರ್ಕಾರ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.

ಕಾಗಿನೆಲೆ ಕನಕ ಗುರುಪೀಠ ಕೆಲ್ಲೋಡು ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ‘ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಜಿಲ್ಲೆಯ ರೈತಪರ ಸಂಘಟನೆಗಳ ಹಲವು ದಶಕಗಳ ಹೋರಾಟದ ಫಲವಾಗಿದೆ. ಕಳೆದ ವರ್ಷದಿಂದ ಹೆಬ್ಬೂರು ಹಳ್ಳದ ಮಾರ್ಗವಾಗಿ ಭದ್ರಾ ನೀರನ್ನು ವಿ.ವಿ ಸಾಗರಕ್ಕೆ ಹರಿಸುತ್ತಿರುವುದು ರೈತರಿಗೆ ಸಮಾಧಾನ ತಂದಿದೆ. ಭದ್ರಾ ಮೇಲ್ದಂಡೆ ಯೋಜನೆಯ ಶಾಶ್ವತ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಬಯಲು ಸೀಮೆಯ ಜಿಲ್ಲೆಯ ಕೆರೆಗಳಿಗೆ ಹಾಗೂ ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ನದಿಯ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹರಿಸಬೇಕು. ಈ ಕಾರ್ಯ ತ್ವರಿತವಾದಲ್ಲಿ ಬರದ ನಾಡಿನ ರೈತರ ಬದುಕು ಹಸನಾಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.